ಕಂಪ್ಲಿ: ತಾಲ್ಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ವಿದ್ಯುತ್ ಅವಘಡ ಸಂಭವಿಸಿ ಎರಡು ಬೃಹತ್ ಭತ್ತದ ಮೇವಿನ ಬಣಿವೆಗಳು ಭಸ್ಮವಾಗಿವೆ.
ಸಂಪೂರ್ಣ ಭಸ್ಮವಾದ ಎರಡು ಬಣಿವೆಗಳು ಗ್ರಾಮದ ಎಂ.ಗೋಪಾಲಪ್ಪ ಹನುಮಂತರೆಡ್ಡಿ ಅವರಿಗೆ ಸೇರಿವೆ. ಗ್ರಾಮದಲ್ಲಿ ಸಂಜೆ 5.30ರ ಸುಮಾರಿಗೆ ಬೀಸಿದ ಬಿರುಗಾಳಿಗೆ ವಿದ್ಯುತ್ ಕಂಬದ ತಂತಿ ತುಂಡಾಗಿ ತಕ್ಷಣ ಕಾಣಿಸಿಕೊಂಡ ಕಿಡಿಗಳು ಹತ್ತಿರದ ಎರಡು ಬೃಹತ್ ಭತ್ತದ ಮೇವಿನ ಬಣಿವೆಗಳಿಗೆ ತಗುಲಿ ಈ ಘಟನೆ ನಡೆದಿದೆ.
‘ಆರು ಎಮ್ಮೆ, ನಾಲ್ಕು ಆಕಳು ಆರೈಕೆ ಮಾಡಿ ಹೈನುಗಾರಿಕೆ ಮಾಡುತ್ತಿದ್ದೆ. ಬೇಸಿಗೆಯಲ್ಲಿ ಮೇವಿನ ಕೊರತೆಯಾಗಬಹುದು ಎಂದು ನೂರು ಎಕರೆ ಭತ್ತದ ಮೇವು ಖರೀದಿಸಿ ಎರಡು ಬೃಹತ್ ಬಣಿವೆ ಹಾಕಿದ್ದೆ. ಸದ್ಯ ಮೇವು ಸಂಪೂರ್ಣ ಭಸ್ಮವಾಗಿದ್ದರಿಂದ ಸುಮಾರು ₹ 3 ಲಕ್ಷ ನಷ್ಟವುಂಟಾಗಿದೆ’ ಎಂದು ರೈತ ಗೋಪಾಲಪ್ಪ ಬೇಸರದಿಂದ ತಿಳಿಸಿದರು.
ವಿಷಯ ತಿಳಿದ ಕುರುಗೋಡು ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.