ಕಂಪ್ಲಿ: ಪಟ್ಟಣದ ಐತಿಹಾಸಿಕ ಸೋಮಪ್ಪ ಕೆರೆಯಲ್ಲಿ ಎರಡು ಮೊಸಳೆಗಳು ಪ್ರತ್ಯಕ್ಷವಾಗಿದ್ದು, ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿಗಳು, ಮೀನುಗಾರರು ಸೆರೆಗಾಗಿ ಎರಡು ದಿನಗಳಿಂದ ಕಾರ್ಯಾಚರಣೆ ನಡೆದಿದ್ದಾರೆ.
ಹೊಸಪೇಟೆ ಪ್ರಾದೇಶಿಕ ಅರಣ್ಯ ವಲಯದ ಗಸ್ತು ಅರಣ್ಯ ಪಾಲಕ ಬಿ. ರಾಘವೇಂದ್ರ, ಅರಣ್ಯ ವೀಕ್ಷಕ ಬಿ. ನಾಗಪ್ಪ ಕೆರೆ ಬಳಿ ಮೊಸಳೆಯ ಚಲನವಲನ ಕುರಿತು ನಿಗಾ ವಹಿಸಿದ್ದಾರೆ. ಇಲ್ಲಿಯ ಕೋಟೆ ಪ್ರದೇಶದ ಮೀನುಗಾರರು ಮೊಸಳೆ ಸೆರೆ ಹಿಡಿಯಲು ಬಲೆ ಹಾಕಿ ಶೋಧ ನಡೆಸಿದ್ದಾರೆ. ಕೆರೆ ಏರಿ ಮೇಲೆ ವಾಯುವಿಹಾರಕ್ಕೆ ಬರುವವರಿಗೆ ಎಚ್ಚರಿಕೆ ನೀಡಲು ಪುರಸಭೆ ಆಡಳಿತದಿಂದ ಮೊಸಳೆ ಎಚ್ಚರಿಕೆ ಕುರಿತು ಬ್ಯಾನರ್ ಹಾಕಲಾಗಿದೆ.
ಜೂ.24ರಂದು ಕೆರೆ ಮಧ್ಯ ಭಾಗದಲ್ಲಿರುವ ದುಂಡು ಕಟ್ಟಡದ ಬಳಿ ದೊಡ್ಡ ಗಾತ್ರದ ಮೊಸಳೆ ಕಾಣಿಸಿಕೊಂಡಿತ್ತು. ಸೆರೆಗಾಗಿ ಸತ್ತ ಕೋಳಿ ಹಾಕಿದ್ದರಿಂದ ಮೊಸಳೆ ತಿಂದು ಹೋಗಿದ್ದು, ಬಲೆಗೆ ಬೀಳಲಿಲ್ಲ. ಈ ಮಧ್ಯೆ ಕೆರೆಗೆ ಚರಂಡಿ ನೀರು ಸೇರಿ ಮಲಿನವಾಗುತ್ತಿದ್ದು, ಮೊಸಳೆ ಆರೋಗ್ಯ ಮತ್ತು ಪ್ರಾಣಕ್ಕೆ ಕಂಟಕವಾಗುತ್ತಿದೆ. ಕೆರೆಗೆ ಚರಂಡಿ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕಿದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದರು.
‘ಮೊಸಳೆ ಸೆರೆಗೆ ಇನ್ನಷ್ಟು ಬಲೆಗಳನ್ನು ಹಾಕಲಾಗುವುದು’ ಎಂದು ಕೋಟೆ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಎಸ್.ಆರ್. ಚಿನ್ನರಾಜು ತಿಳಿಸಿದರು.
‘ಕೆರೆ ಏರಿಯಲ್ಲಿ ವಾಯುವಿಹಾರ ನಡೆಸುವವರು ಎಚ್ಚರಿಕೆ ವಹಿಸಬೇಕು. ಕೆರೆಗೆ ಇಳಿಯಬಾರದು’ ಎಂದು ಮುಖ್ಯಾಧಿಕಾರಿ ಕೆ. ದುರುಗಣ್ಣ ವಿನಂತಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.