ಬಳ್ಳಾರಿ: ಬಳ್ಳಾರಿಯ ಕಪ್ಪಗಲ್ಲು ಗ್ರಾಮದಲ್ಲಿ ಮಂಗಳವಾರ ನರೇಗಾ ಕೆಲಸದಲ್ಲಿ ನಿರತರಾಗಿದ್ದ ತಾಯಪ್ಪ (58) ಅವರು ಮೃತಪಟ್ಟಿದ್ದಾರೆ.
ಸಿರಿವಾರ ಗ್ರಾಮದ ತಾಯಪ್ಪ ಮತ್ತು ಪತ್ನಿ ತಾಯಮ್ಮಾ ನರೇಗಾ ಕೂಲಿ ಕಾರ್ಮಿಕರಾಗಿದ್ದು, ಮೂರು ದಿನಗಳಿಂದ ಕಪ್ಪಗಲ್ಲು ಗ್ರಾಮದ ಕೆ. ರಂಗನಾಥ ಸಾಯಿ ಎಂಬುವವರ ಹೊಲದ ಬಳಿಯ ಹಳ್ಳದಲ್ಲಿ ನರೇಗಾ ಕೂಲಿ ಕೆಲಸ ಮಾಡುತ್ತಿದ್ದರು. ಮಂಗಳವಾರವೂ ಎಂದಿನಂತೆ ಕೆಲಸಕ್ಕೆ ಹೋಗಿದ್ದರಾದರೂ, ಬೆಳಿಗ್ಗೆ 8.30ರ ಹೊತ್ತಿಗೆ ಕೆಲಸ ಮಾಡುತ್ತಿರುವಾಗಲೇ ತಾಯಪ್ಪ ಅಸ್ವಸ್ಥರಾದರು.
ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮೋಕಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರನ್ನು ಪರೀಕ್ಷಿಸಿದ್ದ ವೈದ್ಯರು ತಾಯಪ್ಪ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಅವರಿಗೆ ಹೃದಯಸ್ತಂಭನ ಉಂಟಾಗಿತ್ತು ಎಂದು ಮೂಲಗಳು ತಿಳಿಸಿವೆ.
‘ನರೇಗಾ ಕೂಲಿ ಕಾರ್ಮಿಕರಿಗೆ ‘ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್ಬಿವೈ) ಅಡಿಯಲ್ಲಿ ವಿಮೆ ಮಾಡಿಸಲಾಗಿರುತ್ತದೆ. ಕೆಲಸ ನಿರ್ವಹಣೆ ಹೊತ್ತಲ್ಲೇ ಮೃತಪಟ್ಟರೆ ಅವರಿಗೆ ₹75 ಸಾವಿರದಿಂದ 2 ಲಕ್ಷದ ವರೆಗೆ ಪರಿಹಾರ ನೀಡಬೇಕಾಗುತ್ತದೆ’ ಎಂದು ಕಾರ್ಮಿಕ ಮುಖಂಡರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.