ತೋರಣಗಲ್ಲು: ಗ್ರಾಮದಲ್ಲಿ ಸುಸಜ್ಜಿತ ಆಧುನಿಕ ಬಸ್ ನಿಲ್ದಾಣ, ಸಿಸಿ ರಸ್ತೆ, ಚರಂಡಿ, ಮಹಿಳೆಯರ ಸಾಮೂಹಿಕ ಶೌಚಾಲಯ, ವಸತಿ, ಕುಡಿಯುವ ನೀರು ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಡಿವೈಎಫ್ಐ, ವಿವಿಧ ಸಂಘಟನೆಗಳ ಮುಖಂಡರು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಳ್ಳಾಪುರದ ವಿರೇಶಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಡಿವೈಎಫ್ಐ ಸಂಘಟನೆಯ ತೋರಣಗಲ್ಲು ಗ್ರಾಮ ಘಟಕದ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ‘ಗ್ರಾಮವು ಪ್ರಸ್ತುತ ದಿನಗಳಲ್ಲಿ ದೊಡ್ಡ ಗ್ರಾಮವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಜನರ ಸಂಚಾರದ ಅನುಕೂಲಕ್ಕಾಗಿ ಜಿಲ್ಲಾಡಳಿತವು ಸುಸಜ್ಜಿತ ಆಧುನಿಕ ಬಸ್ ನಿಲ್ದಾಣವನ್ನು ನಿರ್ಮಸಬೇಕು. ಗ್ರಾಮದ 2ನೇ ವಾರ್ಡ್ನಲ್ಲಿ ಸಿಸಿ ರಸ್ತೆ, ಚಂರಡಿ, ಮಹಿಳೆಯರ ಸಾಮೂಹಿಕ ಶೌಚಾಲಯದ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕದ, ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಕಾಮಗಾರಿಗಳನ್ನು ಶೀಘ್ರವಾಗಿ ಹಮ್ಮಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಗ್ರಾಮದಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಅಧಿಕಾರಿಗಳ ಬಳಿ ಚರ್ಚಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದು ತೋರಣಗಲ್ಲು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಅಳ್ಳಾಪುರದ ವಿರೇಶಪ್ಪ ಪ್ರತಿಕ್ರಿಯಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಸ್ವಾಮಿ, ಕಾಸಿಂ, ಶಿವು, ಹನುಮಂತ, ಎ.ಸ್ವಾಮಿ, ಅರ್ಜುನ್, ಆಕಾಶ್, ದೊಡ್ಡಬಸಮ್ಮ, ಅಂಬಮ್ಮ, ತಿಮ್ಮಕ್ಕ, ರಾಮಕ್ಕ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.