ತೋರಣಗಲ್ಲು: ಹೋಬಳಿಯ ಬನ್ನಿಹಟ್ಟಿ ಗ್ರಾಮದಲ್ಲಿ ಗ್ರಾಮದ ಸೇರಿದಂತೆ ನಾಗಾಲಾಪುರ, ಎಸ್.ಗಂಗಾಲಾಪುರ, ಲಿಂಗದಹಳ್ಳಿ ಗ್ರಾಮಗಳ ಶಾಲಾ ಕಾಲೇಜು ವಿದ್ಯಾರ್ಥಿಗಳ ನಿತ್ಯ ಸಂಚಾರಕ್ಕಾಗಿ ಪ್ರತ್ಯೇಕ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು, ಸಾರ್ವಜನಿಕರು ಬುಧವಾರ ಸಾರಿಗೆ ಬಸ್ಗಳನ್ನು ತಡೆದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ಬನ್ನಿಹಟ್ಟಿ ಗ್ರಾಮದ ಕಾಲೇಜು ವಿದ್ಯಾರ್ಥಿನಿ ಸಂಗೀತಾ ಮಾತನಾಡಿ, ‘ಸಾರಿಗೆ ಬಸ್ಗಳ ಸಮಸ್ಯೆಯಿಂದ ಶಾಲಾ, ಕಾಲೇಜುಗಳಿಗೆ ತೆರಳಲು ನಿತ್ಯ ಸಮಸ್ಯೆಯಾಗುತ್ತಿದೆ. ಸಂಡೂರು ಪಟ್ಟಣಕ್ಕೆ ತೆರಳಲು ಬೆಳಗಿನ ಸಮಯದಲ್ಲಿ ಒಂದೇ ಬಸ್ ಇರುವುದರಿಂದ ಎಲ್ಲ ಗ್ರಾಮಗಳ ವಿದ್ಯಾರ್ಥಿಗಳು ಒಂದೇ ಬಸ್ನಲ್ಲೆ ತೆರಳಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಇಲಾಖೆಯವರು ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ನ ವ್ಯವಸ್ಥೆ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.
‘ಶೀಘ್ರ ಕ್ರಮವಹಿಸದಿದ್ದರೆ ಮುಂದಿನ ದಿನಗಳಲ್ಲಿ ಸಾರಿಗೆ ಇಲಾಖೆಯ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ’ ಎಂದು ಬನ್ನಿಹಟ್ಟಿ ಗ್ರಾಮದ ಕನಕದಾಸ ಯುವಕ ಸಂಘದ ಅಧ್ಯಕ್ಷ ಮನಗೌಡ ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಸಂಡೂರು ಸಾರಿಗೆ ಘಟಕದ ಅಧಿಕಾರಿಗಳು, ಪೊಲೀಸರು ಆಗಮಿಸಿ ಬಸ್ಗಳ ಸಮಸ್ಯೆ ಬಗ್ಗೆ ವಿದ್ಯಾರ್ಥಿಗಳ ಬಳಿ ಚರ್ಚಿಸಿದರು. ‘ಹೆಚ್ಚುವರಿ ಬಸ್ಗಳನ್ನು ಬಿಡಲು ಉನ್ನತ ಅಧಿಕಾರಿಗಳ ಬಜೊತೆ ಚರ್ಚಿಸಿ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲಾಗುವುದು’ ಎಂದು ಭರವಸೆ ನೀಡಿದರು.
‘ಸಂಡೂರು ಭಾಗದ ಶಾಲಾ– ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇಲಾಖೆಯಿಂದ ಹೆಚ್ಚಿನ ಬಸ್ಗಳನ್ನು ಓಡಿಸಲು ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಬಳ್ಳಾರಿ ಜಿಲ್ಲಾ ಸಾರಿಗೆ ವಿಭಾಗೀಯ ಅಧಿಕಾರಿ ಇನಾಯತ್ ಬಾಗಬಾನ್ ಪ್ರತಿಕ್ರಿಯಿಸಿದರು.
ವಿವಿಧ ಗ್ರಾಮಗಳ ವಿದ್ಯಾರ್ಥಿಗಳಾದ ರಾಧಿಕಾ, ಈರಮ್ಮ, ಅಂಬಿಕಾ, ಅಶ್ವಿನಿ, ರಾಹುಲ್, ವಿರೇಶ್, ಪುರುಷೋತ್ತಮ, ಶಿವಕುಮಾರ್ ಸೇರಿದಂತೆ ವಿವಿಧ ಗ್ರಾಮಗಳ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.