ಬಳ್ಳಾರಿ: ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿ ಸುರಿಯುತ್ತಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬಿತ್ತನೆ ಬೀಜದ ಅಂಗಡಿಗಳಲ್ಲಿ ಕೃಷಿಕರ ಸಾಲು ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ಹತ್ತಿ, ಮೆಣಸಿನಕಾಯಿ, ಜೋಳ, ತೊಗರಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇವುಗಳಿಗೆ ಹೆಚ್ಚಿನ ಬೇಡಿಕೆ ಕಂಡು ಬಂದಿದೆ.
ಆದರೆ, ಬಿತ್ತನೆ ಬೀಜದ ಬೆಲೆ ಏರಿಕೆ ಬಿಸಿ ರೈತರಿಗೆ ತಟ್ಟಿದೆ. ಈ ಬಾರಿ ತೊಗರಿ ಬಿತ್ತನೆ ಬೀಜದ ಬೆಲೆ ಕೆ.ಜಿಗೆ ₹200 ತಲುಪಿದೆ. ಹಿಂದಿನ ವರ್ಷ ₹150 ಇತ್ತು ಎಂದು ಕೃಷಿಕರು ಹೇಳಿದರು.
‘ಹಿಂದಿನ ವರ್ಷ ಹೆಚ್ಚಿನ ಮಳೆಯಾಗಿಲ್ಲ. ಹೀಗಾಗಿ ಬಿತ್ತನೆ ಬೀಜದ ಪೂರೈಕೆಯೂ ಕಡಿಮೆಯಾಗಿದೆ’ ಎಂದು ಮಾರಾಟಗಾರರು ಹೇಳಿದ್ದಾರೆ.
ಬಿಸಿಲಲ್ಲೇ ವ್ಯಾಪಾರ: ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಿಂದ ಅಬ್ಬರಿಸಿದ ಮಳೆ ಎರಡು ದಿನಗಳಿಂದ ಬಿಡುವು ನೀಡಿದೆ. ಅದರ ಬೆನ್ನಿಗೇ ಬಿಸಿಲು ಮತ್ತೆ ಹೆಚ್ಚಾಗುತ್ತಿದೆ. ನಿತ್ಯ 39 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ದಾಖಲಾಗುತ್ತಿದೆ. ಹೀಗಾಗಿ ರೈತರು ಬಿಸಿಲಲ್ಲೇ ಅಂಗಡಿಗಳ ಎದುರು ಸಾಲುಗಟ್ಟಿ ನಿಂತು ಬೀಜ ಖರೀದಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.