ಹರಪನಹಳ್ಳಿ: ಅಸಲಿ ಚಿನ್ನವೆಂದು ನಂಬಿಸಿ ನಕಲಿ ಬಂಗಾರ ಕೊಟ್ಟು ₹ 1.50 ಲಕ್ಷ ನಗದು ಹಣ ವಂಚಿಸಿರುವ ಘಟನೆ ಪಟ್ಟಣದ ಹಿರೆಕೆರೆ ಬಳಿ ಮೇ 17ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮಂಡ್ಯಮೂಲದ ಬಿ.ಟಿ.ಬಸವರಾಜ್ ವಂಚನೆಗೆ ಒಳಗಾದವರು. ಮೇ 14ರಂದು ಅಪರಿಚಿತ ವ್ಯಕ್ತಿಯೊಬ್ಬ ಮೊ– 9063502900 ನಂಬರಿನಿಂದ ಮಂಡ್ಯ ಮೂಲದ ವ್ಯಕ್ತಿಗೆ ಕರೆ ಮಾಡಿ ನನ್ನ ಬಳಿ ಅಸಲಿ ಚಿನ್ನವಿದ್ದು ಕಡಿಮೆ ದರಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ್ದಾನೆ.
ಇದನ್ನು ನಂಬಿದ ಬಸವರಾಜ್ ಅವರು ಮೇ 17ರಂದು ಅಪರಿಚಿತ ವ್ಯಕ್ತಿ ಹೇಳಿದಂತೆ ಹರಪನಹಳ್ಳಿ ಬಸ್ ನಿಲ್ದಾಣಕ್ಕೆ ಬಂದಾಗ ವಂಚಕರು ಎರಡು ಚಿನ್ನದ ತುಣುಕು ಕೊಟ್ಟು ಕಳಿಸಿದ್ದಾರೆ.
ಅವು ಪರಿಶೀಲಿಸಿದಾಗ ಅಸಲಿ ಎಂದು ಗೊತ್ತಾಗಿದೆ. ಖಚಿತಪಡಿಸಲು ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ₹ 10 ಲಕ್ಷ ಕೊಟ್ಟರೆ ಒಂದುವರೆ ಕೆ.ಜಿ.ಯಷ್ಟು ಅಸಲಿ ಬಂಗಾರ ಕೊಡುವುದಾಗಿ ಆಸೆ ಹುಟ್ಟಿಸಿದ್ದಾರೆ.
ಬಸವರಾಜ್ ಮಂಡ್ಯದಿಂದ ಆಗಮಿಸಿ ₹ 1.50 ಲಕ್ಷ ಹಣ ಕೊಟ್ಟು 800 ಗ್ರಾಂ. ಬಂಗಾರದ ಕಾಯಿನ್ ಖರೀದಿಸಿ, ಮಂಡ್ಯಕ್ಕೆ ತೆರಳಿ ಪರಿಶೀಲಿಸಿದಾಗ ನಕಲಿ ಎಂಬುವುದು ಗೊತ್ತಾದ ತಕ್ಷಣ ಅಪರಿಚಿತ ವ್ಯಕ್ತಿಯ ನಂಬರಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿದ್ದು, ಮೋಸಕ್ಕೆ ಒಳಗಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.