ಬಳ್ಳಾರಿ: ನಗರದ ಗಡಿಗಿ ಚನ್ನಪ್ಪ (ರಾಯಲ್) ವೃತ್ತದಲ್ಲಿದ್ದ ಪಾಲಿಕೆಯ ವಾಣಿಜ್ಯ ಕಟ್ಟಡವನ್ನು ಪಾಲಿಕೆ ಸೋಮವಾರ ತೆರವುಗೊಳಿಸಿದೆ.
ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಸದ್ಯ ಬೃಹತ್ ಗಡಿಯಾರ ಗೋಪುರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವೃತ್ತದಲ್ಲಿ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಪರಿಹರಿಸಲು ಪಾಲಿಕೆ ತನ್ನ ಸ್ವಂತ ವಾಣಿಜ್ಯ ಕಟ್ಟಡವನ್ನು ಧ್ವಂಸ ಮಾಡಿದೆ.
ಭಾನುವಾರ ರಾತ್ರಿ ಆರಂಭವಾದ ಕಟ್ಟಡ ತೆರವು ಕಾರ್ಯ ಸೋಮವಾರ ಸಂಜೆವರೆಗೆ ಮುಂದುವರಿದಿತ್ತು. ಹೀಗಾಗಿ ವೃತ್ತದಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಯಿತು. ಪಾಲಿಕೆಯ ಎರಡು ಅಂತಸ್ಥಿನ ಈ ಕಟ್ಟಡದಲ್ಲಿ ಒಟ್ಟು 12 ಮಳಿಗೆಗಳಿದ್ದವು. ಬಟ್ಟೆ ಅಂಗಡಿ, ಹೋಟೆಲ್ಗಳು ಇದರಲ್ಲಿದ್ದವು.
‘ಕಟ್ಟಡ ಧ್ವಂಸಗೊಳಿಸಿರುವುದು ಪಾಲಿಕೆಗೆ ಆಗಿರುವ ನಷ್ಟವೇ ಆದರೂ, ನಗರದ ನಾಗರಿಕರ ಅನುಕೂಲಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಕಟ್ಟಡ ತೆರವಾದರೆ ಗಡಿಗಿ ಚನ್ನಪ್ಪ ವೃತ್ತದಲ್ಲಿ ಸಂಚಾರ ಸಮಸ್ಯೆ ನಿವಾರಣೆಯಾಗಲಿದೆ’ ಎಂದು ಪಾಲಿಕೆಯ ವಲಯ ಆಯುಕ್ತ ಗುರುರಾಜ್ ಸವದಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.