ಹರಪನಹಳ್ಳಿ: ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯ ಆವರಣದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 1311 ಪ್ರಕರಣಗಳನ್ನು ರಾಜೀಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗಿದೆ.
ಹಿರಿಯ ಮತ್ತು ಕಿರಿಯ ಸಿವಿಲ್ ನ್ಯಾಯಲಯದಲ್ಲಿ ಒಟ್ಟು 1604 ಪ್ರಕರಣ ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 1311 ಪ್ರಕರಣ ಇತ್ಯರ್ಥಗೊಂಡು, 293 ಪ್ರಕರಣ ಬಾಕಿ ಉಳಿದವು. ಹಿರಿಯ ಸಿವಿಲ್ ನ್ಯಾಯಧೀಶೆ ಎಂ.ಭಾರತಿ ಅವರಿದ್ದ ಪೀಠದಲ್ಲಿ, ₹ 45, 56, 190 ಮೌಲ್ಯದ ಒಟ್ಟು 597 ಪ್ರಕರಣ ಇತ್ಯರ್ಥ ಪಡಿಸಲಾಯಿತು.
ಇವುಗಳಲ್ಲಿ ರಸ್ತೆ ಅಪಘಾತ, ಬ್ಯಾಂಕ್ ಸಾಲ, ಅಡಮಾನ, ಸಿವಿಲ್ ಸೇರಿವೆ. ಕಿರಿಯ ಸಿವಿಲ್ ನ್ಯಾಯಧೀಶೆ ಫಕ್ಕೀರವ್ವ ಕೆಳಗೇರಿ ಅವರಿದ್ದ ಪೀಠದಲ್ಲಿ ₹ 40, 84, 072 ಮೌಲ್ಯದ ಒಟ್ಟು 714 ಪ್ರಕರಣ ರಾಜೀಸಂಧಾನ ಮಾಡಲಾಯಿತು.
ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡು ಪರಸ್ಪರ ದೂರವಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿ ರಾಜೀಸಂದಾನಕ್ಕೆ ಸಮ್ಮತಿಸಿದ್ದು ವಿಶೇಷವಾಗಿತ್ತು. ಈ ವೇಳೆ ಕುಟುಂಬಸ್ಥರು, ವಕೀಲರು ಸಿಹಿ ಹಂಚಿ ಸಂಭ್ರಮಿಸಿದರು.
ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಾಟೀಲ್, ಉಪಾಧ್ಯಕ್ಷ ಸಿ.ಪೀರ ಅಹ್ಮದ್, ಕಾರ್ಯದರ್ಶಿ ಜಿಎಸ್ಎಂ ಕೊಟ್ರಯ್ಯ, ಜಂಟಿ ಕಾರ್ಯದರ್ಶಿ ಕೇಶವಮೂರ್ತಿ, ಖಜಾಂಚಿ ಹೂಲೆಪ್ಪ, ಹೆಚ್ಚುವರಿ ಸರ್ಕಾರಿ ವಕೀಲರಾದ ಕೆ.ಜಗದಪ್ಪ, ನಂದೀಶ್, ಸರ್ಕಾರಿ ಅಭಿಯೋಜಕಿ ಮೀನಾಕ್ಷಿ, ಎಸ್.ನಿರ್ಮಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.