ADVERTISEMENT

‘ನಾಯಕನಕೆರೆ’ಗಿಲ್ಲ ತುಂಗಭದ್ರಾ ನದಿ ನೀರು

52 ಕೆರೆಗಳಿಗೆ ಗಂಗೆ: ಗುರುತ್ವಾಕರ್ಷಣೆಯಿಂದ 26 ಕೆರೆಗಳಿಗೆ ನದಿನೀರು

ವಿಶ್ವನಾಥ ಡಿ.
Published 26 ಜುಲೈ 2024, 5:09 IST
Last Updated 26 ಜುಲೈ 2024, 5:09 IST
ಹರಪನಹಳ್ಳಿ ತಾಲ್ಲೂಕು ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯಿಂದ ಹೊರಗುಳಿದಿರುವ ಐತಿಹಾಸಿಕ ನಾಯಕನಕೆರೆ
ಹರಪನಹಳ್ಳಿ ತಾಲ್ಲೂಕು ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯಿಂದ ಹೊರಗುಳಿದಿರುವ ಐತಿಹಾಸಿಕ ನಾಯಕನಕೆರೆ   

ಹರಪನಹಳ್ಳಿ: ಮೂವತ್ತೈದು ವರ್ಷಗಳ ಹಿಂದೆ ಪಟ್ಟಣಕ್ಕೆ ಕುಡಿಯುವ ನೀರಿನ ಆಶ್ರಯವಾಗಿದ್ದ ತಾಲ್ಲೂಕಿನ ಕಾಯಕದಹಳ್ಳಿ ರಸ್ತೆಯ ಐತಿಹಾಸಿಕ ‘ನಾಯಕನಕೆರೆ’ಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯ ಭಾಗ್ಯ ದೊರೆತಿಲ್ಲ.

ರಾಜ್ಯ ಸರ್ಕಾರದಿಂದ 2017ರಲ್ಲಿ ₹208 ಕೋಟಿ ಮೊತ್ತಕ್ಕೆ ತಾಂತ್ರಿಕ ಅನುಮೋದನೆ ದೊರೆತು, 2018ರ ಏಪ್ರಿಲ್ 1ರಿಂದ ಕಾಮಗಾರಿ ಆರಂಭಿಸಿ ಈಗ ಪೂರ್ಣಗೊಂಡು ತುಂಗಭದ್ರಾ ನದಿಯಿಂದ ಯಶಸ್ವಿಯಾಗಿ 50 ಕೆರೆಗಳಿಗೆ ನೀರು ತಲುಪುತ್ತಿವೆ. ಈ ಯೋಜನೆಯಡಿ ತುಂಗಭದ್ರಾ ನದಿಯಿಂದ 0.75 ಟಿಎಂಸಿ ನೀರು ಎತ್ತಿ 50 ಕೆರೆಗಳಿಗೆ ಹರಿಸಲಾಗುತ್ತಿರುವ ಬಗ್ಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಆದರೆ ಪಟ್ಟಣಕ್ಕೆ ಹೊಂದಿಕೊಂಡು ಕಾಯಕದಹಳ್ಳಿ ರಸ್ತೆಯ ಸರ್ವೆ ನಂಬರ್ 48ರಲ್ಲಿ ಇರುವ, 17ನೇ ಶತಮಾನದಲ್ಲಿ ಮೊದಲ ರಾಜ ಸೋಮಶೇಖರನಾಯಕ ಕಟ್ಟಿಸಿರುವ ನಾಯಕನಕೆರೆಗೆ ಮಾತ್ರ ತುಂಗಭದ್ರಾ ನದಿಯಿಂದ ನೀರು ಬಾರದೇ, ಸ್ವಚ್ಚತೆಯೂ ಇಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೆರೆಯಂಗಳದಲ್ಲಿರುವ ಕೊಳವೆಬಾವಿಗಳ ಮೂಲಕ ಈಗಲೂ ಹರಪನಹಳ್ಳಿ ಪಟ್ಟಣದ ಕೆಲವು ಪ್ರದೇಶಗಳಿಗೆ ನೀರು ಒದಗಿಸಲಾಗುತ್ತಿದೆ.

ADVERTISEMENT

ನದಿಯಿಂದ ಬಲಭಾಗದ ರೈಸಿಂಗ್ ಮೆನ್ ಮೂಲಕ 27 ಕೆರೆಗಳಿಗೆ ನೀರು ಪೂರೈಸುತ್ತಿದ್ದು ತಿಪ್ಪನಾಯಕನಹಳ್ಳಿ ಕೆರೆ ಅಂತ್ಯಗೊಳ್ಳುತ್ತದೆ. ಎರಡನೇ ರೈಸಿಂಗ್ ಮೆನ್ ಮೂಲಕ 23ಕೆರೆ ಹಾದು, ಹರಪನಹಳ್ಳಿ ಕೆರೆಗೆ ಕೊನೆಗೊಳ್ಳುತ್ತದೆ. ಎರಡು ಪಾಯಿಂಟ್‌ಗಳ ಪೈಕಿ 26 ಕೆರೆಗಳಿಗೆ ಗುರತ್ವಾಕರ್ಷಣೆ ಬಲದಿಂದ ನೀರು ಪೂರೈಸಲಾಗುತ್ತದೆ. ಒಟ್ಟು 190 ಕಿ.ಮೀ ಉದ್ದದ ಪೈಪ್ ಲೈನ್ ಮೂಲಕ ಪ್ರತಿ ಸೆಕೆಂಡಿಗೆ 2.04 ಕ್ಯೂಬಿಕ್‌ ಮೀಟರ್‌ ನಷ್ಟು ನೀರು ಹರಿಯುತ್ತಿದೆ ಎನ್ನುತ್ತವೆ ಇಲಾಖೆ ಮೂಲಗಳು.

ತುಂಗಭದ್ರಾ ನದಿಯಿಂದ ಕೆರೆಗಳಿಗೆ ಹರಿಸುವ ನೀರು ಸಾಕಾಗುವುದಿಲ್ಲ ಪೂರೈಕೆ ಪ್ರಮಾಣ ಹೆಚ್ಚಿಸಬೇಕು.

–ತೆಲಿಗಿ ಸುರೇಶಪ್ಪ ಜಿಲ್ಲಾ ಘಟಕದ ಉಪಾಧ್ಯಕ್ಷ ರೈತ ಸಂಘ. ಹರಪನಹಳ್ಳಿ

ಕಾಯಕದಹಳ್ಳಿ ರಸ್ತೆಯ ನಾಯಕನಕೆರೆಗೆ ತುಂಗಭದ್ರಾ ನದಿ ನೀರು ತುಂಬಿಸಿದರೆ ಆ ಭಾಗದ ರೈತರಿಗೆ ಬೆಳೆಯುತ್ತಿರುವ ಹರಪನಹಳ್ಳಿ ಪಟ್ಟಣದ ಜನತೆಗೆ ಅನುಕೂಲವಾಗುತ್ತದೆ

–ಎಂ.ಲಕ್ಷ್ಮಣ್ ರೈತ ಹರಪನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.