ಕಂಪ್ಲಿ: ಹೋಳಿ ಹುಣ್ಣಿಮೆ ಅಂಗವಾಗಿ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ 10ಪ್ರಮುಖ ಸ್ಥಳಗಳಲ್ಲಿ ರತಿದೇವಿ ಮತ್ತು ಮನ್ಮಥರ ಗೊಂಬೆಗಳನ್ನು ಪ್ರತಿಷ್ಠಾಪಿಸುವ ಮೂಲಕ ಹೋಳಿ ಹುಣ್ಣಿಮೆ ಆಚರಣೆ ಭಾನುವಾರದಿಂದ ಗರಿಗೆದರಿದೆ.
ಸ್ಥಳೀಯ ದೇವಾಂಗಪೇಟೆಯ ಮಡ್ಡಿಕಟ್ಟೆ, ವೀರತ್ಪೇಟೆ ಬಸವೇಶ್ವರ ದೇವಸ್ಥಾನ, ಮೇಲ್ಗಡೆ ಪೇಟೆ ಬನಶಂಕರಿ ದೇವಸ್ಥಾನ, ಪೇಟೆ ಬಸವೇಶ್ವರ ತೇರಿನ ಮನೆ, ಕೋಟೆ ವೀರಭದ್ರೇಶ್ವರ ದೇವಸ್ಥಾನ, ಅಮೃತಶಿಲಾ ರಾಮಚಂದ್ರ ದೇವಸ್ಥಾನ, ಆದೋನಿ ಮಸೀದಿ ಬಳಿಯ ಗುಗ್ರಿಕಟ್ಟೆ ಬಸವೇಶ್ವರ ದೇವಸ್ಥಾನ, ಸಕ್ಕರೆ ಕಾರ್ಖಾನೆ ಪ್ರದೇಶ, ತಾಲ್ಲೂಕಿನ ರಾಮಸಾಗರ, ನಂ.10 ಮುದ್ದಾಪುರ ಗ್ರಾಮಗಳಲ್ಲಿ ಕಾಮ, ರತಿದೇವಿಯ ಪ್ರತಿಮೆಗಳನ್ನು ಸಂಘಟಕರು ಸಂಪ್ರದಾಯದಂತೆ ಪ್ರತಿಷ್ಠಾಪಿಸಿದ್ದಾರೆ.
ಪಟ್ಟಣದ ಮುಖ್ಯರಸ್ತೆಯಲ್ಲಿ ನೀಲಕಂಠೇಶ್ವರ ಕಾಮಣ್ಣ ಸೇವಾ ಸಮಿತಿ ಬಳಗದವರು ನೀಲಕಂಠೇಶ್ವರ ದೇವಸ್ಥಾನದಲ್ಲಿ ಆಧುನಿಕ ಉಡುಗೆಯ ರತಿ ಮತ್ತು ಮನ್ಮಥರ ಗೊಂಬೆಗಳನ್ನು ಪ್ರತಿಷ್ಠಾಪಿಸಿದ್ದು, ಈ ಬಾರಿ ನೋಡುಗರ ವಿಶೇಷ ಗಮನಸೆಳೆಯುತ್ತಿವೆ ಮಾರ್ಚ್ 25ರ ಹೋಳಿ ಹುಣ್ಣಿಮೆ ದಿನ ಸಂಜೆ ಕಾಮನ ದೇವರ ಕುರಿತು ಹಾಡುಗಳನ್ನು ಹಾಡುತ್ತಾ ಕಾಮನಪಟ ಮೆರವಣಿಗೆ ನಡೆಸಲಾಗುವುದು. ಮಧ್ಯರಾತ್ರಿ ಕಾಮ ಮತ್ತು ರತಿಯರ ಚಿತ್ರಪಟವನ್ನು ದಹಿಸಲಾಗುತ್ತದೆ.
ಕಾಮದೇವ ಪ್ರತಿಷ್ಠಾಪಿಸಿದ ಆವರಣದಲ್ಲಿ ಮಾರ್ಚ್ 26ರಂದು ಸಂಘಟಕರೆಲ್ಲರು ಸೇರಿ ಓಕುಳಿ(ಬಣ್ಣ) ಆಟ ಸಂಭ್ರಮದಿಂದ ಆಚರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.