ಕಂಪ್ಲಿ: ತುಂಗಭದ್ರಾ ನದಿಯಲ್ಲಿರುವ ವಿಜಯನಗರ ಕಾಲುವೆ ಮುಖ್ಯ ಅಣೆಕಟ್ಟು ಮೇಲ್ಭಾಗದಲ್ಲಿರುವ ಗಂಗಾವತಿ ಕೆಳಮಟ್ಟ ಕಾಲುವೆ ಅಣೆಕಟ್ಟು ವಿಸ್ತರಿಸುವ ಕಾಮಗಾರಿಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಕಾಮಗಾರಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಸುದ್ದಿಗಾರರೊಂದಿಗೆ ಮಾತನಾಡಿ, ಕಂಪ್ಲಿ ಅಣೆಕಟ್ಟು ಮೇಲ್ಭಾಗದಲ್ಲಿರುವ ಗಂಗಾವತಿ ಕೆಳಮಟ್ಟ ಕಾಲುವೆ ಅಣೆಕಟ್ಟಿನ ಕಾಮಗಾರಿ ಮುಂದುವರಿದಿದೆ. ಆದರೆ, ಮೊದಲಿದ್ದ 540 ಮೀಟರ್ ಉದ್ದದ ಬದಲಿಗೆ 670 ಮೀಟರ್ ಉದ್ದದ ಅಂದಾಜು ತಯಾರಿಸಿ ಈಗಾಗಲೇ 510- 520 ಮೀಟರ್ ಉದ್ದ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಅದರಿಂದ ಕಂಪ್ಲಿ ಅಣೆಕಟ್ಟೆ ಕಡೆಗೆ ಹರಿದುಬರುವ ನೀರಿನ ಪ್ರಮಾಣ ತೀವ್ರ ಕುಸಿತಗೊಳ್ಳಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಂಪ್ಲಿ, ರಾಮಸಾಗರ, ಬೆಳಗೋಡುಹಾಳು, ಸಣಾಪುರ ಕೆಳಭಾಗದ ರೈತರ ಭೂಮಿಗಳಿಗೆ ಮುಂದಿನ ದಿನಗಳಲ್ಲಿ ಒಂದು ಬೆಳೆಗೆ ಸಾಕಾಗುವಷ್ಟು ನೀರು ದೊರೆಯುವುದಿಲ್ಲ. ವಿಶೇಷವಾಗಿ ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಂಪ್ಲಿ ಭಾಗದ ನೀರಾವರಿ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತ್ವರಿತ ಕ್ರಮ ತೆಗೆದುಕೊಳ್ಳಬೇಕು. ನಿರ್ಲಕ್ಷ್ಯವಹಿಸಿದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ರೈತ ಸಂಘದ ಕೋಟೆ ಘಟಕದ ಅಧ್ಯಕ್ಷ ಮಣ್ಣೂರು ನವೀನಗೌಡ, ರೈತರಾದ ಸಿ. ಮಲ್ಲನಗೌಡ, ಅಯ್ಯೋದಿ ವೆಂಕಟೇಶ್, ಕೆ. ರಮೇಶ, ಮುರಾರಿ, ಗಂಗಣ್ಣ, ಸೆರೆಗಾರ ನಾಗರಾಜ, ಕೊಟ್ಟೂರು ರಮೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.