ಕೊಟ್ಟೂರು: ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಉತ್ತಮ ಮಳೆಯಾಗಿದ್ದು, ರೈತರು ಜಮೀನು ಹದ ಮಾಡಿಕೊಂಡು ಬಿತ್ತನೆ ಸಜ್ಜಾಗಿದ್ಧಾರೆ.
ಮಳೆಯಿಂದಾಗಿ ಅಂಬಳಿ ಗ್ರಾಮದ ನಂದಿಬೇವೂರು ಕೊಟ್ರಪ್ಪ ಇವರ ಮನೆ ಚಾವಣೆ ಕುಸಿದಿರುವುದು ಬಿಟ್ಟರೆ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಾಲ್ಲೂಕು ಆಡಳಿತ ತಿಳಿಸಿದೆ.
ಗಜಾಪುರ ಗ್ರಾಮದ ಬಾರಿಕರ ರಾಮಪ್ಪ ಇವರ ತೋಟದಲ್ಲಿ ಸಿಡಿಲಿನಿಂದ ಕೆಲವು ತೆಂಗಿನಮರಗಳು ಹಾನಿಯಾಗಿರುವುದರಿಂದ ಸ್ಥಳಕ್ಕೆ ತೋಟಗಾರಿಕೆ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮೋತಿಕಲ್ ತಾಂಡ ಸಮೀಪದಲ್ಲಿ ಇದ್ಲಿಕಟ್ಟೆ ಹಳ್ಳ ತುಂಬಿ ಹರಿದ ಪರಿಣಾಮ ಜಮೀನುಗಳು ಜಲಾವೃತಗೊಂಡಿದೆ. ಬಿತ್ತನೆ ಮಾಡಿದ್ದ ಎಳೆ ಪೈರು ನೀರಿನಿಂದ ಆವೃತ್ತವಾಗಿದೆ.
ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಕೃಷಿ ಹೊಂಡಗಳು, ಹಳ್ಳ ಹಾಗೂ ಗೋಕಟ್ಟೆಗಳು ಭರ್ತಿಯಾಗಿವೆ.
ಬಿತ್ತನೆಗೆ ಬೇಕಾದ ಬೀಜ ರಸಗೊಬ್ಬರಗಳ ಖರೀದಿಗೆ ಅಂಗಡಿಗಳ ಮುಂದೆ ಮುಗಿಬಿದ್ದಿರುವುದು ಎಲ್ಲೆಡೆ ಕಂಡು ಬಂದಿತು. ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಸರತಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜ ರಸಗೊಬ್ಬರಗಳ ಖರೀದಿಗೆ ಮುಂದಾದರು. ಬೀಜ ಹಾಗೂ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸದಂತೆ ಹಾಗೂ ನಿಗದಿತ ದರಕ್ಕಿಂತಲೂ ಹೆಚ್ಚಿನ ದರದಲ್ಲಿ ಮಾರಾಟ ಮಾಡದಂತೆ ತಾಲ್ಲೂಕು ಆಡಳಿತ ಈಗಾಗಲೇ ಮಾರಾಟಗಾರರಿಗೆ ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.