ಕೊಟ್ಟೂರು: ತಾಲ್ಲೂಕಿನಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಸುರಿದ ನಿರಂತರ ಮಳೆಗೆ ಪಟ್ಟಣದ ಕೆರೆಯ ಕೋಡಿ ಮೇಲೆ ಶನಿವಾರ ಮಧ್ಯಾಹ್ನದ ವೇಳೆಗೆ ನೀರು ಹರಿಯುತ್ತಿದ್ದಂತೆ ಜನತೆಯ ಮನದಲ್ಲಿ ಹರ್ಷದ ಹೊನಲನ್ನು ಹರಿಸಿದೆ.
16 ನೇ ಶತಮಾನದಲ್ಲಿ ವಿಜಯನಗರ ಅರಸರ ಆಳ್ವಿಕೆಯಲ್ಲಿ ಕೆರೆ ನಿರ್ಮಾಣಗೊಂಡು 1899 ರಲ್ಲಿ ಪುನರ್ ನಿರ್ಮಾಣ ಕಂಡಿದೆ ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. 1999 , 2009 ಹಾಗೂ 2022 ರಲ್ಲಿ ಕೋಡಿ ಬಿದ್ದಿತ್ತು.
ಒಟ್ಟು 304 ಹೆಕ್ಟೇರ್ ಅಚ್ಚು ಕಟ್ಟು ಪ್ರದೇಶ ಹೊಂದಿರುವ ಕೆರೆಯ ಏರಿ ಗರಿಷ್ಠ 15 ಮೀ ಎತ್ತರವಿದ್ದು 492 ಮೀಟರ್ ಕ್ಯುಸೆಕ್ಸ್ ನಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ದೊಡ್ಡ ಕೆರೆಗೆ ಎರಡು ತೂಬುಗಳನ್ನು ಅಳವಡಿಸಲಾಗಿದ್ದು ಈ ಭಾಗದ ಜನತೆಯ ಜೀವನಾಡಿಯಾಗಿದೆ.
2017 ರಲ್ಲಿ ಕೆರೆಯ ಅಭಿವೃದ್ಧಿಗೆ ನಮ್ಮ ಕೆರೆ ನಮ್ಮ ಹಕ್ಕು ತಂಡದ ಸದಸ್ಯರು, ಮಠಾಧೀಶರ ಪರಿಷತ್ತು, ಸಂಘ ಸಂಸ್ಥೆಗಳ ಪರಿಶ್ರಮ ಹಾಗೂ ಸಾರ್ವಜನಿಕರ ಸಹಕಾರದಿಂದ ಕೆರೆಯಲ್ಲಿ ಬೆಳೆದಿದ್ದ ಜಾಲಿಗಿಡಗಳನ್ನು ತೆರವುಗೊಳಿಸಿ ನರೇಗಾ ಯೋಜನೆಯಡಿ ಹೂಳು ತಗೆದು ಹರಿದು ಬರುವ ನೀರಿನ ಮೂಲಗಳನ್ನು ಸ್ವಚ್ಛಗೊಳಿಸಿದ ಪರಿಣಾಮ ಕೆರೆಯಲ್ಲಿ ಇಂದು ಅಪಾರ ಪ್ರಮಾಣದ ನೀರು ಸಂಗ್ರಹವಾಗಿ ಈ ಭಾಗದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿದೆ.
ಇದುವರೆಗೂ ನೀರು ಕಾಣದ ಕೆರೆ ಏಕಾಏಕಿ ತುಂಬಿದ್ದರಿಂದ ನಿಷ್ಕ್ರಿಯವಾಗಿರುವ ತೂಬುಗಳನ್ನು ಸರಿಪಡಿಸಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದನ್ನು ತಡೆಯಬೇಕಾಗಿದೆ. ಬಿರುಕು ಬಿಟ್ಟಿರುವ ಏರಿಗಳನ್ನು ದುರಸ್ಥಿಗೊಳಿಸಿ ಕಾಲುವೆಗಳಲ್ಲಿರುವ ಹೂಳನ್ನು ತೆರವುಗೊಳಿಸಿ ರೈತರಿಗೆ ಬೆಳೆ ಬೆಳೆಯಲು ಅನುವು ಮಾಡಿಕೊಡಬೇಕೆಂದು ಸಾಮಾಜಿಕ ಹೋರಾಟಗಾರ ಡಾ.ಸದಾನಂದ ಹೆಗ್ಗಡಾಳ್ ಮಠ್ ಒತ್ತಾಯಿಸಿದ್ದಾರೆ.
ಕೆರೆ ಸುತ್ತಮುತ್ತಲಿನ ಗಿಡ ಗಂಟೆ ತೆರವುಗೊಳಿಸಿ, ಕೆರೆ ಏರಿ ಹಾಗೂ ತೂಬುಗಳನ್ನುಕೂಡಲೇ ದುರಸ್ಥಿಗೊಳಿಸಿ ನೀರು ಸೋರಕೆಯನ್ನು ತಡೆಯಲಾಗುವುದು ಎಂದು ಸಣ್ಣ ನೀರಾವರಿ ಇಲಾಖೆ ಎಇ ಮೇಡಂ ರಾಜು ತಿಳಿಸಿದರು.
ನೈಸರ್ಗಿಕ ಸಂಪನ್ಮೂಲಗಳಲ್ಲಿ ಜಲ ಸಂಪತ್ತು ಒಂದು. ನೀರು ಜೀವಜಲ ಸಕಲ ಜೀವರಾಶಿಗಳಿಗೂ ನೀರು ಅತ್ಯವಶ್ಯಕವಾಗಿರುವುದರಿಂದ ನೀರು ಪೋಲಾಗದಂತೆ ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಯಾಗಿರುವುದರಿಂದ ಸಣ್ಣ ನೀರಾವರಿ ಇಲಾಖೆಯು ಸ್ಥಳೀಯ ಆಡಳಿತದ ಜೊತೆ ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದುಕೊಂಡು ಕೆರೆ ಸಂರಕ್ಷಣೆಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.
ಕೆರೆಗೆ ತೆರಳಲು ರಸ್ತೆ ನಿರ್ಮಾಣ ಒತ್ತುವರಿ ತೆರವುಗೊಳಿಸಿ ದಂಡೆಯಲ್ಲಿ ಮರ ಬೆಳೆಸಿ ಕುಳಿತುಕೊಳ್ಳಲು ಆಸನ ಅಳವಡಿಸಿ ವಾಯು ವಿಹಾರದ ಸುಂದರ ತಾಣವನ್ನಾಗಿಸಬೇಕುಅಂಚೆ ಕೊಟ್ರೇಶ್ ನಮ್ಮ ಕೆರೆ ನಮ್ಮ ಹಕ್ಕು ತಂಡದ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.