ADVERTISEMENT

ಕುಮಾರಸ್ವಾಮಿ ಅವರಿಗೆ ಮಹಿಳೆಯರ ಬಗ್ಗೆ ಗೌರವ ಇಲ್ಲ: ಕೆ.ಜೆ.ಜಯಲಕ್ಷ್ಮಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 14:29 IST
Last Updated 16 ಏಪ್ರಿಲ್ 2024, 14:29 IST
ಹಗರಿಬೊಮ್ಮನಹಳ್ಳಿಯಲ್ಲಿ ಕೆಪಿಸಿಸಿ ರಾಜ್ಯ ಘಟಕದ ಮಹಿಳಾ ಪ್ರಧಾನ ಕಾರ್ಯದರ್ಶಿ ಕೆ.ಜೆ.ಜಯಲಕ್ಷ್ಮಿ ನಾಯಕ ಮತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಶಾಹೀರಾ ಬಾನು ನೇತೃತ್ವದಲ್ಲಿ ನೂರಾರು ಮಹಿಳೆಯರು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದರು
ಹಗರಿಬೊಮ್ಮನಹಳ್ಳಿಯಲ್ಲಿ ಕೆಪಿಸಿಸಿ ರಾಜ್ಯ ಘಟಕದ ಮಹಿಳಾ ಪ್ರಧಾನ ಕಾರ್ಯದರ್ಶಿ ಕೆ.ಜೆ.ಜಯಲಕ್ಷ್ಮಿ ನಾಯಕ ಮತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಶಾಹೀರಾ ಬಾನು ನೇತೃತ್ವದಲ್ಲಿ ನೂರಾರು ಮಹಿಳೆಯರು ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ನಡೆಸಿದರು   

ಹಗರಿಬೊಮ್ಮನಹಳ್ಳಿ: ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪುತ್ತಿದ್ದಾರೆ ಎಂದಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮಹಿಳೆಯರ ಕುರಿತು ಕಿಂಚಿತ್ತೂ ಗೌರವ ಇಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಜೆ.ಜಯಲಕ್ಷ್ಮಿ ನಾಯಕ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.

ಗೌರವಯುತವಾಗಿ ಬದುಕು ಕಂಡುಕೊಂಡಿರುವ ಮಹಿಳೆಯರು ದೇವಸ್ಥಾನಗಳಿಗೆ ಹೋಗುವುದು, ತಂದೆತಾಯಿಗಳ ಊರುಗಳಿಗೆ ಉಚಿತ ಬಸ್‌ಗಳಲ್ಲಿ ಪ್ರಯಾಣಿಸುವುದು ದಾರಿ ತಪ್ಪಿದ ಹಾಗೆನಾ? ಕೀಳು ಮಟ್ಟದ ಮಾತನ್ನಾಡುತ್ತಿರುವ ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಮಹಿಳೆ ಇರುವ ಚಿಹ್ನೆಯನ್ನು ಮೊದಲು ಬದಲಿಸಲಿ ಎಂದು ಸವಾಲೆಸೆದರು.

ADVERTISEMENT

ಬಿಜೆಪಿ ಪಕ್ಷದ ಸುಳ್ಳು ಸ್ಕೀಂಗಳಿಂದ ಮಹಿಳೆಯರು, ಅಸಹಾಯಕರು, ಪರಿಶಿಷ್ಟರು, ಹಿಂದುಳಿದವರು, ಅಲ್ಪಸಂಖ್ಯಾತರು ತತ್ತರಗೊಂಡಿದ್ದಾರೆ. ಬಡವರ ಬದುಕಿಗೆ ಭದ್ರ ಬುನಾದಿ ಹಾಕದೇ ಕೇವಲ ಧರ್ಮ ಮತ್ತು ದೇಶಭಕ್ತಿಯ ಹೆಸರಿನಲ್ಲಿ ಭಾವನಾತ್ಮಕವಾಗಿ ಜನರನ್ನು ದಾರಿ ತಪ್ಪಿಸಲು ಹೊರಟಿದ್ದಾರೆ, ಬಣ್ಣದ ಮಾತುಗಳ ಮೂಲಕ ಬಡ ಕುಟುಂಬಗಳ ಮಕ್ಕಳನ್ನೇ ತಮ್ಮ ಬಲೆಗೆ ಬೀಳಿಸಿಕೊಳ್ಳುತ್ತಾರೆ ಎಂದರು.

ಸಮ ಸಮಾಜದ ನಿರ್ಮಾಣ ಕೇವಲ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ, ಆದ್ದರಿಂದ ಮಹಿಳೆಯರು ಪಕ್ಷದ ಸಾಧನೆಯನ್ನು, ಗ್ಯಾರಂಟಿ ಯೋಜನೆಗಳ ಪ್ರಯೋಜನಗಳ ಕುರಿತು ತಮ್ಮ ಮಕ್ಕಳಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.

‘ಹಿಂದೆ ಶ್ರೀರಾಮುಲು ಮಂತ್ರಿ, ಸಂಸದರಾಗಿ ಜಿಲ್ಲೆಯನ್ನು ಉದ್ಧಾರ ಮಾಡಿಲ್ಲ, ಎಷ್ಟು ಸಾರಿ ಗೆದ್ರೂ ಏನೂ ಮಾಡಲ್ಲ, ಅವರು ಹಿಂದೆ ಬಿಜೆಪಿ ಬಿಟ್ಟು ಫ್ಯಾನ್ ತಿರುಗಿಸಿದರೂ ಮತದಾರರು ಬೆಂಬಲಿಸಿದ್ದರು, ಈ ಬಾರಿ ಮತ್ತೊಮ್ಮೆ ಸೋಲಿನ ರುಚಿ ತೋರಿಸಲಿದ್ದಾರೆ‘ ಲೇವಡಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಶಾಹೀರಾಬಾನು, ಹೊಸಪೇಟೆ ಅಧ್ಯಕ್ಷೆ ಯೋಗಲಕ್ಷ್ಮಿ, ಮುಖಂಡರಾದ ನಾಗಮ್ಮ, ಇ.ಚೈತನ್ಯ, ಸುನಂದಾ ಮಾತನಾಡಿದರು.

ದಿಕ್ಕಾರದ ಕೂಗು: ನೂರಾರು ಮಹಿಳೆಯರು ಎಚ್.ಡಿ.ಕುಮಾರಸ್ವಾಮಿ ಭಾವಚಿತ್ರ ಹಿಡಿದುಕೊಂಡು ಅವರ ವಿರುದ್ಧ ಧಿಕ್ಕಾರ ಕೂಗಿದರು, ಮಹಿಳೆಯರ ಚಾರಿತ್ರ್ಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ರೆ ಸುಮ್ಮನೆ ಬಿಡುವುದಿಲ್ಲ, ಈ ಚುನಾವಣೆಯಲ್ಲಿ ಪಾಠ ಕಲಿಸ್ತೀವಿ ಎಂದರು. ಜೆಡಿಎಸ್ ಪಕ್ಷದ ವಿರುದ್ಧವೂ ದಿಕ್ಕಾರ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.