ಸಂಡೂರು: ತಾಲ್ಲೂಕಿನ ಚೋರನೂರು ಹೋಬಳಿಯ ನಿಡಗುರ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿರೇನಹಳ್ಳಿ ಗ್ರಾಮದ ಎಸ್.ಹೊನ್ನೂರಸ್ವಾಮಿ ಎಂಬುವವರ ಕುರಿ ಫಾರಂ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದೆ.
ಗ್ರಾಮದಿಂದ ಕೇವಲ 100 ಮೀಟರ್ ದೂರ ಇರುವ ಫಾರಂ ಬಳಿ ಸುತ್ತಾಡಿ ಅಲ್ಲಿನ ಸಾಕು ನಾಯಿಯನ್ನು ಹಿಡಿಯಲು ಪ್ರಯತ್ನಿಸಿದೆ. ಅದೃಷ್ಟವಶಾತ್ ನಾಯಿ ತಪ್ಪಿಸಿಕೊಂಡು ಓಡಿದೆ. ಫಾರಂನಲ್ಲಿ ಸುಮಾರು 50ಕ್ಕೂ ಹೆಚ್ಚು ಕುರಿ ಹಾಗೂ ಟಗರುಗಳು, ಏಳೆಂಟು ಎಮ್ಮೆಗಳಿದ್ದರೂ ಚಿರತೆ ಯಾವುದೇ ಹಾನಿ ಮಾಡಿಲ್ಲ.
ಫಾರಂ ಮಾಲೀಕರ ನಾಯಿ ಚಿರತೆಯಿಂದ ತಪ್ಪಿಸಿಕೊಂಡು ಊರೊಳಗಿನ ಮನೆಗೆ ಬಂದಿದೆ. ಎಂದೂ ಮನೆಗೆ ಬಾರದ ನಾಯಿ ಓಡಿ ಬಂದಿದ್ದರಿಂದ ಅನುಮಾನ ಬಂದು ಫಾರಂಗೆ ಅಳವಡಿಸಲಾಗಿದ್ದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ ಭಾನುವಾರ ರಾತ್ರಿ 10.50ರ ಸುಮಾರಿಗೆ ಚಿರತೆ ನಾಯಿ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ ದೃಶ್ಯ ಕಂಡುಬಂದಿದೆ.
ಚಿರತೆ ಬಂದ ವಿಷಯವನ್ನು ಹೊನ್ನೂರ ಸ್ವಾಮಿಯವರು ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು, ಹೊಸಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶೀಘ್ರವೇ ಬೋನ್ ಅಳವಡಿಸುವ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.