ಕಂಪ್ಲಿ: ಇಲ್ಲಿಯ ಶಿಬಿರದಿನ್ನಿ ಬಲ ಭಾಗದಲ್ಲಿ 1988ರಲ್ಲಿ ನಿವೇಶನಕ್ಕಾಗಿ ₹ 350 ಪುರಸಭೆಗೆ ಪಾವತಿಸಿದ್ದು, ಇದುವರೆಗೂ ಸ್ಥಳ ಮಂಜೂರು ಮಾಡಿಲ್ಲ ಎಂದು ನಿವೇಶನ ರಹಿತ 9 ಜನರು ಆರೋಪಿಸಿದರು.
ಇಲ್ಲಿಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಬಳ್ಳಾರಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಶನಿವಾರ ಆಯೋಜಿಸಿದ್ದ ಸಾರ್ವಜನಿಕ ಕುಂದು ಕೊರತೆ ಸ್ವೀಕಾರ ಸಭೆಯಲ್ಲಿ ನಿರಾಶ್ರಿತರು ಅರ್ಜಿ ಸಲ್ಲಿಸಿ ಗೋಳು ತೋಡಿಕೊಂಡರು.
ನಟರಾಜ ಕಲಾ ವಿಜಯ ಸಂಘದ ಮುಂಭಾಗದಲ್ಲಿ ನಿರ್ಮಿಸಿದ ಸಿಸಿ ರಸ್ತೆ ಕಳಪೆ, ಹಕ್ಕು ಪತ್ರ ಬದಲಾವಣೆ, ತಾಲ್ಲೂಕಿನ ಹಿರೇಜಾಯಿಗನೂರು ಗ್ರಾಮದಲ್ಲಿ ಸ್ಮಶಾನ ಒತ್ತುವರಿ,
ಇಲ್ಲಿಯ ಎಪಿಎಂಸಿಯಲ್ಲಿ ಅನಧಿಕೃತವಾಗಿ ನಿರ್ಮಿಸಿದ 39 ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಲು ಮತ್ತು ತಾಲ್ಲೂಕಿನಲ್ಲಿ ಎಸ್.ಸಿ, ಎಸ್.ಟಿ ಸಮುದಾಯಕ್ಕೆ ಮಂಜೂರಾದ ಅನುದಾನ, ಯೋಜನೆಗಳ ಬಗ್ಗೆ ಅಧಿಕಾರಿಗಳು ಸರ್ಮಪಕ ಮಾಹಿತಿ ನೀಡುತ್ತಿಲ್ಲ ಎಂದು ಸಾರ್ವಜನಿಕರು ಅರ್ಜಿ ಸಲ್ಲಿಸಿದರು.
ಲೋಕಾಯುಕ್ತ ನಿರೀಕ್ಷಕ ಮಹಮ್ಮದ್ ರಫಿ ಮಾತನಾಡಿ, ವಿವಿಧ ಇಲಾಖೆಗೆ ಸಂಬಂಧಿಸಿದ 10 ಅರ್ಜಿಗಳು ಸಲ್ಲಿಕೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದರು.
ತಹಶೀಲ್ದಾರ್ ಶಿವರಾಜ, ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ, ತಾಲ್ಲೂಕು ಪಂಚಾಯಿತಿ ಇಒ ಶ್ರೀಕುಮಾರ್, ನರೇಗಾ ಎ.ಡಿ ಕೆ.ಎಸ್. ಮಲ್ಲನಗೌಡ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.