ತೋರಣಗಲ್ಲು: ‘ರಾಜ್ಯ ಸರ್ಕಾರವು ಶಾಸಕಾಂಗ ಸಭೆಯಲ್ಲಿ ಒಳಮೀಸಲಾತಿ ಕುರಿತು ಚರ್ಚಿಸಿ, ಆದಷ್ಟು ಬೇಗ ಜಾರಿ ಮಾಡದಿದ್ದರೇ ಬಳ್ಳಾರಿ ಜಿಲ್ಲಾ, ಸಂಡೂರು ತಾಲ್ಲೂಕಿನ ಪರಿಶಿಷ್ಟ ಘಟಕದ ಎಲ್ಲ ಪದಾಧಿಕಾರಿಗಳಿಂದ ಕಾಂಗ್ರೆಸ್ನ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಲಾಗುವುದು’ ಎಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಮಾಧ್ಯಮ ವಕ್ತಾರ ಎಸ್.ಮಲಿಯಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಜಾರಿ ವಿಚಾರವಾಗಿ ಸುಳ್ಳು ಭರವಸೆಗಳನ್ನು ನೀಡುತ್ತಾ ಬಂದಿದೆ. ಒಳ ಮೀಸಲಾತಿಯು ಸಂವಿಧಾನ ಬದ್ದ ಹಕ್ಕು, ಅದನ್ನು ಜಾರಿ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರಿಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯದ ಆದೇಶ ಧಿಕ್ಕರಿಸಿ ಅದನ್ನು ಜಾರಿ ಮಾಡದೇ ರಾಜ್ಯ ಸರ್ಕಾರ ಕಾಲಹರಣ ಮಾಡುತ್ತಿದೆ. ಇದನ್ನು ಮಾದಿಗ ಸಮಾಜ ಖಂಡಿಸುತ್ತದೆ’ ಎಂದರು.
‘ಉಪ ಚುನಾವಣೆಯಲ್ಲಿ ಮಾದಿಗ ಸಮುದಾಯವು ತಟಸ್ಥ ನಿಲುವು ತಾಳಲಿದೆ. ಸಂಡೂರು ಕ್ಷೇತ್ರದಲ್ಲಿ ಮಾದಿಗ ಸಮುದಾಯದ 30 ಸಾವಿರ ನಿರ್ಣಾಯಕ ಮತಗಳಿವೆ. ಈ ಉಪ ಚುನಾವಣೆಯಲ್ಲಿ ಮಾದಿಗ ಸಮುದಾಯವು ಭಾಗವಹಿಸದೇ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದೆ’ ಎಚ್ಚರಿಕೆ ನೀಡಿದರು.
ಕುರೆಕುಪ್ಪ ಪಟ್ಟಣದ ಶಾಕ್ಯಮಿತ್ರ ತಂಡದ ಮುಖಂಡ ಕಸ್ತೂರಿ ಮಂಜುನಾಥ, ನಾಗರಾಜ್, ಹುಲುಗಪ್ಪ, ರಾಮ, ಗಂಗಾಧರ, ಪಂಪಾಪತಿ, ವೀರೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.