ADVERTISEMENT

ವಡ್ಡರ ಹಳ್ಳಕ್ಕೆ ಶಾಸಕ ನೇಮರಾಜನಾಯ್ಕ ಭೇಟಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 7:06 IST
Last Updated 9 ಜೂನ್ 2024, 7:06 IST
ಕೊಟ್ಟೂರಿನ ಮಲ್ಲನಾಯ್ಕನಹಳ್ಳಿ ಸಮೀಪದಲ್ಲಿರುವ ವಡ್ಡರಹಳ್ಳಕ್ಕೆ ಶಾಸಕ ಕೆ.ನೇಮರಾಜನಾಯ್ಕ ಭೇಟಿ ನೀಡಿ ಸೇತುವೆ ನಿರ್ಮಾಣದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು
ಕೊಟ್ಟೂರಿನ ಮಲ್ಲನಾಯ್ಕನಹಳ್ಳಿ ಸಮೀಪದಲ್ಲಿರುವ ವಡ್ಡರಹಳ್ಳಕ್ಕೆ ಶಾಸಕ ಕೆ.ನೇಮರಾಜನಾಯ್ಕ ಭೇಟಿ ನೀಡಿ ಸೇತುವೆ ನಿರ್ಮಾಣದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು   

ಕೊಟ್ಟೂರು: ಪಟ್ಟಣದ ಕೂಡ್ಲಿಗಿ ರಸ್ತೆಯ ಮಲ್ಲನಾಯ್ಕನಹಳ್ಳಿ ಬಳಿ ಹಾದು ಹೋಗಿರುವ ವಡ್ಡರಹಳ್ಳಕ್ಕೆ ಶಾಸಕ ಕೆ.ನೇಮರಾಜನಾಯ್ಕ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಧಾರಕಾರವಾಗಿ ಮಳೆ ಬಂದರೆ ಹಳ್ಳದಲ್ಲಿ ಹಾದು ಹೋಗಿರುವ ರಸ್ತೆ ಕಾಣದಂತೆ ಜಲಾವೃತವಾಗುತ್ತದೆ. ನೀರಿನ ರಭಸ ಕಡಿಮೆಯಾಗುವವರೆಗೂ ವಾಹನ ಚಾಲಕರು ಕಾದು ನಂತರ ವಾಹನಗಳನ್ನು ಚಲಾಯಿಸುವಂತಹ ಪರಿಸ್ಥಿತಿ ಇತ್ತು. ಹಲವಾರು ವರ್ಷಗಳಿಂದ ಸೇತುವೆ ನಿರ್ಮಿಸಬೇಕೆಂಬುದು ಜನತೆಯ ಒತ್ತಾಸೆಯಾಗಿತ್ತು.

ಮಳೆಗಾಲದಲ್ಲಿ ರಸ್ತೆ ಕಾಣದೆ ವಾಹನಗಳು ಸಂಚರಿಸಿದಾಗ ಅವಘಡಗಳು ಸಂಭವಿಸಿದ ಉದಾಹರಣೆಗಳಿವೆ. ಆದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೇತುವೆ ನಿರ್ಮಾಣ ಕಾರ್ಯ ಇದುವರೆಗೂ ಕೈಗೂಡಿರಲಿಲ್ಲ.

ADVERTISEMENT

ನಾಲ್ಕೈದು ದಿನಗಳಿಂದ ಸುರಿದ ನಿರಂತರ ಮಳೆಗೆ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂದಾಜು ವೆಚ್ಚ ಕೂಡಲೇ ನೀಡುವಂತೆ ಸೂಚಿಸಿದರು.

ನಂತರ ಶಾಸಕರು ಮಾತನಾಡಿ, ‘ಶೀಘ್ರದಲ್ಲಿಯೇ ಸೇತುವೆ ನಿರ್ಮಾಣ ಮಾಡಲಾಗುವುದು. ಪಟ್ಟಣದಲ್ಲಿ ಮಿನಿ ವಿಧಾನಸೌಧ, ಬಸ್ ನಿಲ್ದಾಣ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಸರ್ಕಾರದ ಬಿಟ್ಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಅನುದಾನಗಳು ಬಿಡುಗಡೆಗೊಳಿಸುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ಎಂ.ಜೆ.ಹರ್ಷವರ್ಧನ್, ಬೂದಿ ಶಿವಕುಮಾರ್, ಮಹಾಂತೇಶ್,ವೈ.ಮಲ್ಲಿಕಾರ್ಜುನ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.