ಕೊಟ್ಟೂರು: ಪಟ್ಟಣದ ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವದ ನಿಮಿತ್ತ ಸೋಮವಾರ ರಾತ್ರಿ ಬೆಳ್ಳಿ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.
ಹಿರೇಮಠದಲ್ಲಿ ಅರ್ಚಕ ಬಳಗ ಪೂಜಾ ವಿಧಿ ವಿಧಾನಗಳನ್ನು ನೆರವೇರುಸುತ್ತಿದ್ದಂತೆ ಸಕಲ ಮಂಗಲವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನೆರದ ಭಕ್ತ ಸ್ತೋಮ ಜೈಕಾರ ಹಾಕಿ ಬಾಳೆಹಣ್ಣು ತೂರಿ ಭಕ್ತಿಯನ್ನು ಸಮರ್ಪಿಸಿದರು.
ರಥವು ತೊಟ್ಟಿಲು ಮಠದ ಮುಖಾಂತರ ಗಚ್ಚಿನಮಠ ತಲುಪಿ ಸ್ವಾಮಿಯ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಂತೆ ಪುನಃ ರಥವು ಬೆಳಗಿನ ಜಾವ ಹಿರೇಮಠಕ್ಕೆ ಬಂದು ತಲುಪಿತು. ಸ್ವಾಮಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ಮಹಾಮಂಗಳಾರತಿಯೊಂದಿಗೆ ಕಾರ್ತಿಕೋತ್ಸವ ಸಂಪನ್ನಗೊಂಡಿತು.
ಶ್ರಿಗುರು ಕೊಟ್ಟೂರೇಶ್ವರ ಸ್ವಾಮಿ ಕಲ್ಯಾಣ ಮಂಟಪದ ಸಮಿತಿಯವರು ಆಯೋಜಿಸಿದ್ದ ಲಕ್ಷ ದೀಪೋತ್ಸವದ ನಿಮಿತ್ತ ದೇವಸ್ಥಾನಗಳ ಆವರಣ ಹಾಗೂ ರಥ ಬೀದಿಯಲ್ಲಿ ಜೋಡಿಸಿದ್ದ ಪ್ರಣತಿಗಳಿಗೆ ಭಕ್ತರು ಎಣ್ಣೆ ಹಾಕಿ ದೀಪಗಳನ್ನು ಹಚ್ಚಿದರು.
ಪಟ್ಟಣದ ಹೊರವಲಯದಲ್ಲಿ ವಾಹನಗಳ ನಿಲುಗಡೆಗೆ ಪೊಲೀಸ್ ಇಲಾಖೆ ವ್ಯವಸ್ಥೆ ಕಲ್ಪಿಸಿತ್ತು. ಭಕ್ತರ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿತ್ತು. ನಾಡಿನಾದ್ಯಂತ ಆಗಮಿಸಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆದ ನಂತರ ಕೊಟ್ಟೂರಿನ ವಿಶೇಷ ತಿನಿಸಾದ ಮಂಡಕ್ಕಿ ಮಿರ್ಚಿ ಸವಿಯಲು ಪಳಾರದ ಅಂಗಡಿಗಳಿಗೆ ಮುಗಿಬಿದ್ದು ಖರೀದಿಸಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.