–ಎರ್ರಿಸ್ವಾಮಿ ಬಿ.
ತೋರಣಗಲ್ಲು: ಹೋಬಳಿಯ ತಾಳೂರು ಗ್ರಾಮದ ರೈತ ವಾಲ್ಮೀಕಿ ಪಕ್ಕೀರಪ್ಪ ಅವರು ಎರಡು ಎಕರೆ ಜಮೀನಿನಲ್ಲಿ ಪೇರಲೆ, ತೆಂಗು, ರಕ್ತಚಂದನ ಹಾಗೂ ಶ್ರೀಗಂಧ ಗಿಡಗಳನ್ನು ಬೆಳೆದು ವಾರ್ಷಿಕ ₹2ಲಕ್ಷ ಲಾಭ ಗಳಿಸಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಪೇರಲೆ, ತೆಂಗು ಹಾಗೂ ತರಕಾರಿಯನ್ನು ಮೂರು ವರ್ಷಗಳಿಂದ ಸಮೃದ್ಧವಾಗಿ ಬೆಳೆಯುತ್ತಿದ್ದಾರೆ. ಕುಟುಂಬದ ಸದಸ್ಯರೆಲ್ಲರೂ ಸಾವಯವ ಕೃಷಿ ಪದ್ಧತಿಯನ್ನೇ ನಂಬಿ ವರ್ಷ ಪೂರ್ತಿ ಶ್ರಮವಹಿಸಿ ಕೃಷಿ ಆದಾಯದಿಂದ ಜೀವನ ನಡೆಸುತ್ತಿದ್ದಾರೆ.
ವರ್ಷದಲ್ಲಿ ನಾಲ್ಕು ಬಾರಿ ಪೇರಲೆ ಕಟಾವು ಮಾಡಿ ₹2ಲಕ್ಷ ಆದಾಯ ಗಳಿದ್ದಾರೆ. ತೆಂಗಿನ ಬೆಳೆಯಿಂದ ₹50 ಸಾವಿರ ಆದಾಯ ಗಳಿಸಿದ್ದಾರೆ.
ಪ್ರತಿ ವರ್ಷ ವಾಣಿಜ್ಯ ಬೆಳೆಗಳಾದ ಹತ್ತಿ, ಮೆಕ್ಕೆಜೋಳ, ಮೆಣಸಿನಕಾಯಿ, ಸೂರ್ಯಕಾಂತಿ ಮತ್ತು ಕಡಲೆ ಬೆಳೆಯುತ್ತಿದ್ದರು. ಈ ಭಾಗದಲ್ಲಿ ಹೆಚ್ಚು ಕೈಗಾರಿಕೆಗಳು ಇರುವುದರಿಂದ ಧೂಳು ಕಲುಷಿತ ಹೊಗೆಯಿಂದ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿ ಲಾಭಕ್ಕಿಂತ ಹೆಚ್ಚು ನಷ್ಟವೇ ಆಗುತ್ತಿತ್ತು. ಇದರಿಂದ ಆ ಬೆಳೆಗಳಿಗೆ ವಿದಾಯ ಹೇಳಿ ವಿವಿಧ ಹಣ್ಣು, ವಾಣಿಜ್ಯ ಬೇಸಾಯದ ಮೊರೆ ಹೋಗಿದ್ದಾರೆ.
₹ 80ರಂತೆ 750 ಪೇರಲೆ ಸಸಿಗಳನ್ನು, ₹45ರಂತೆ 250 ರಕ್ತಚಂದನ ಸಸಿಗಳನ್ನು, ₹155ರಂತೆ 400 ತೆಂಗಿನ ಸಸಿಗಳನ್ನು, ₹150ರಂತೆ ಒಂದು ಸಾವಿರ ಸಸಿಗಳನ್ನು ತಂದು ನೆಟ್ಟಿದ್ದಾರೆ.
ಸಾವಯವ ಕೃಷಿ ಪದ್ಧತಿಯ ಅನುಸಾರ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ಇತ್ತೀಚೆಗೆ ಉತ್ತಮ ಇಳುವರಿ, ಹೆಚ್ಚಿನ ಆದಾಯಕ್ಕಾಗಿ ರಾಸಾಯನಿಕ ಗೊಬ್ಬರ, ಔಷಧಗಳನ್ನು ಅಲ್ಪ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ.
ಎರಡು ಕೊಳವೆ ಬಾವಿಗಳನ್ನು ಕೊರೆಯಿಸಿದ್ದಾರೆ. ವಿವಿಧ ವೆಚ್ಚಕ್ಕಾಗಿ ಸಂಡೂರಿನ ಖಾಸಗಿ ಬ್ಯಾಂಕಿನಲ್ಲಿ ₹6ಲಕ್ಷ ಸಾಲ ಪಡೆದಿದ್ದಾರೆ.
ಪೇರಲೆ, ಶ್ರೀಗಂಧದ ಸಸಿಗಳನ್ನು ಎರಡು ಎಕರೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಜಮೀನಿನ ಸುತ್ತಲಿನ ಬದುಗಳಲ್ಲಿ ತೆಂಗು, ರಕ್ತಚಂದನ ಸಸ್ಯಗಳನ್ನು ನೆಟ್ಟಿದ್ದಾರೆ. ಇದರೊಂದಿಗೆ 4 ಎಕರೆಯಲ್ಲಿ ಅಡಿಕೆ ಬೆಳೆ ಬೆಳೆಯಲು ತಯಾರಿ ನಡೆಸಿದ್ದಾರೆ.
ತೋಟಗಾರಿಕೆ ಬೆಳೆಗೆ ಅಧಿಕಾರಿಗಳ ಸಹಕಾರ ಮಾರ್ಗದರ್ಶನ ಅಗತ್ಯ. ಕೃಷಿ ಸೌಲಭ್ಯಗಳ ಕುರಿತು ರೈತರಿಗೆ ಸಕಾಲಕ್ಕೆ ಮಾಹಿತಿ ನೀಡಬೇಕುಪಕ್ಕಿರಪ್ಪ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.