ಬಳ್ಳಾರಿ: ತಾಲ್ಲೂಕಿನ ಡಿ.ಕಗ್ಗಲ್ಲು ಗ್ರಾಮದಲ್ಲಿ ಕೂಲಿ ಕಾರ್ಮಿಕ ಕುಟುಂಬಗಳಿಗೆ 100 ದಿನಗಳ ನರೇಗಾ ಕೆಲಸ ನೀಡಲು ಆಗ್ರಹಿಸಿ ಎಐಕೆಕೆಎಂಎಸ್ ರೈತ ಸಂಘಟನೆ ವತಿಯಿಂದ ಚಾನಾಳ್ ಗ್ರಾಮ ಪಂಚಾಯಿತಿ ಎದುರು ಪ್ರತಿಭಟಿಸಲಾಯಿತು. ನಂತರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ್ ಮಾತನಾಡಿ, ‘ಬರದಿಂದಾಗಿ ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. 15 ತಿಂಗಳಲ್ಲಿ 1182 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಮತ್ತು ಕೃಷಿ ಕೂಲಿ ಕಾರ್ಮಿಕರ ಜೀವನಕ್ಕೆ ಸಹಾಯವಾಗುವ ನರೇಗಾ ಯೋಜನೆಯಲ್ಲಿಯೂ ಕೆಲಸ ಕೊಡದಿರುವುದು ರೈತ ವಿರೋಧಿ ಕ್ರಮ. ಮೇಲಧಿಕಾರಿಗಳು ಇತ್ತ ಗಮನ ಹರಿಸಬೇಕು. ರೈತರಿಗೆ ಕೆಲಸ ಕೊಡದಿದ್ದಲ್ಲಿ ಪಂಚಾಯಿತಿ ಕಚೇರಿಗೆ ಮುತ್ತಿಗೆ ಖಚಿತ’ ಎಂದು ಎಚ್ಚರಿಕೆ ನೀಡಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡಿ, ‘ಕೆಲ ದಿನಗಳ ಹಿಂದೆ ಇದೇ ವಿಚಾರಕ್ಕೆ ಪ್ರತಿಭಟನೆ ಮಾಡಲಾಗಿತ್ತು. ಅದರೂ, ಕೆಲಸ ಸಿಗದ ಕಾರಣ 2ನೇ ಬಾರಿಗೆ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗಿ ಬಂತು‘ ಎಂದರು.
ಸಂಘದ ಸದಸ್ಯ ಕೆ.ಶಿವರಾಜ, ರೈತರಾದ ರಾಮಪ್ಪ, ಸೋಮಪ್ಪ, ಗಂಗಾಧರ, ನಾಗರಾಜ, ದೊಡ್ಡ ಪೆದ್ದಯ್ಯ, ಗಾದಿಲಿಂಗಪ್ಪ, ರಾಜ ಸಾಬ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.