ಬಳ್ಳಾರಿ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಅವಳಿ ಜಿಲ್ಲೆ ಬಳ್ಳಾರಿ–ವಿಜಯನಗರಕ್ಕೆ ಈ ವರ್ಷ ಶೇ 74.77ರಷ್ಟು ಫಲಿತಾಂಶ ಬಂದಿದೆ. ಜಿಲ್ಲೆ 29ನೇ ರ್ಯಾಂಕ್ ಗಳಿಸಿದೆ. ಶೇಕಡಾವಾರು ಫಲಿತಾಂಶದಲ್ಲಿ ಹಿಂದಿನ ವರ್ಷಕ್ಕಿಂತಲೂ ಈ ವರ್ಷ ಪ್ರಗತಿಯಾಗಿದ್ದರೂ, ರ್ಯಾಂಕ್ ಪಟ್ಟಿಯಲ್ಲಿ ಎರಡು ಸ್ಥಾನ ಕುಸಿದಿರುವುದು ಕೊಂಚ ಬೇಸರ ತರಿಸಿದೆ.
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 29,948 ವಿದ್ಯಾರ್ಥಿಗಳು ಪಿಯು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರಾದರೂ, 28,026 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 20,955 ಮಂದಿ ಪಾಸಾಗಿದ್ದಾರೆ.
ಫಲಿತಾಂಶದಲ್ಲಿ ಹುಡುಗರಿಗಿಂತ (ಶೇ 77.90) ಹುಡುಗಿಯರೇ ( ಶೇ 83.41) ಮೇಲುಗೈ ಸಾಧಿಸಿದ್ದಾರೆ.
ಪರೀಕ್ಷೆ ಬರೆದ 25,098 ಸಾಮಾನ್ಯ ವಿದ್ಯಾರ್ಥಿಗಳಲ್ಲಿ 19,863 ಮಂದಿ, 1,697 ಪುನಾರಾವರ್ತಿತರಲ್ಲಿ 596 ಮಂದಿ, 1,231 ಖಾಸಗಿ ಅಭ್ಯರ್ಥಿಗಳ ಪೈಕಿ 496 ಮಂದಿ ಉತ್ತೀರ್ಣರಾಗಿದ್ದಾರೆ.
ವಿಭಾಗವಾರು ಫಲಿತಾಂಶ: ಕಲಾ ವಿಭಾಗದಿಂದ ಒಟ್ಟು 9,140 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 6,793 ಮಂದಿ (ಶೇ 74.32) ಪಾಸಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 5,948 ಮಂದಿ ಪರೀಕ್ಷೆ ಬರೆದಿದ್ದರು. 4,758 ಮಂದಿ (ಶೇ80) ಉತ್ತೀರ್ಣಗೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ 9,539 ವಿದ್ಯಾರ್ಥಿಗಳ ಪೈಕಿ 8,312 ಮಂದಿ (ಶೇ 87) ತೇರ್ಗಡೆಗೊಂಡಿದ್ದಾರೆ.
ಬಾಲಕಿಯರೇ ಮುಂದೆ: ಬಳ್ಳಾರಿ–ವಿಜಯನಗರ ಜಿಲ್ಲೆಯಲ್ಲಿ ಮೂರು ವಿಭಾಗ (ಸಾಮಾನ್ಯ)ಗಳಿಂದ ಒಟ್ಟು 13,052 ಗಂಡು ಮಕ್ಕಳು ಪರೀಕ್ಷೆ ಬರೆದಿದ್ದರು. ಈ ಪೈಕಿ 10,168 ಮಂದಿ (77.90) ಪಾಸಾಗಿದ್ದಾರೆ. 11,575 ಹೆಣ್ಣು ಮಕ್ಕಳು ಈ ಬಾರಿ ಪರೀಕ್ಷೆಗೆ ಹಾಜರಾಗಿದ್ದರು. ಇವರ ಪೈಕಿ 9,655 ಮಂದಿ (83.41) ಉತ್ತೀರ್ಣಗೊಂಡಿದ್ದಾರೆ.
ಕಲಾ ವಿಭಾಗದಲ್ಲಿ 4,362 ಗಂಡು ಮಕ್ಕಳು, 3,950 ಹೆಣ್ಣು ಮಕ್ಕಳು, ವಾಣಿಜ್ಯದಲ್ಲಿ 2422 ಗಂಡು ಮಕ್ಕಳು, 2,366 ಹೆಣ್ಣು ಮಕ್ಕಳು, ಕಲಾ ವಿಭಾಗದಲ್ಲಿ 3,384 ಗಂಡುಮಕ್ಕಳು, 3,409 ಹೆಣ್ಣು ಮಕ್ಕಳು ಪಾಸಾಗಿದ್ದಾರೆ. ಪಾಸಾದವರ ಸಂಖ್ಯೆಯಲ್ಲಿ ಗಂಡು ಮಕ್ಕಳು ಮುಂದಿದ್ದರೂ, ಶೇಕಡಾವಾರು ಲೆಕ್ಕಾಚಾರದಲ್ಲಿ ಹೆಣ್ಣು ಮಕ್ಕಳು ಫಲಿತಾಂಶದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ.
ರಾಜ್ಯದಲ್ಲಿ 35 ಕಾಲೇಜುಗಳು ಶೂನ್ಯ ಮಾಡಿವೆ. ಇದರಲ್ಲಿ ಹೊಸಪೇಟೆಯ ವಿನಾಯಕ ಸರಸ್ವತಿ ಅನುದಾನ ರಹಿತ ಪಿಯು ಕಾಲೇಜು ಕೂಡ ಒಂದಾಗಿದೆ.
ಕಲಾ ವಿಭಾಗದಲ್ಲಿ ಮೂವರಿಗೆ 5ನೇ ರ್ಯಾಂಕ್
ಪಿಯು ಫಲಿತಾಂಶದಲ್ಲಿ 592 ಅಂಕ ಪಡೆದಿರುವ ಇಟಗಿಯ ಪಂಚಮ ಸಾಲಿ ಪದವಿಪೂರ್ವ ಕಾಲೇಜಿನ ಪಿ. ವೀರೇಶ್, ಇಂದು ಕಾಲೇಜಿನ ಮಾನಸಾ ಎನ್, ಅನುಷಾ ರಾಜ್ಯಕ್ಕೆ 5 ಮತ್ತು ಜಿಲ್ಲೆಗೆ 4ನೇ ರ್ಯಾಂಕ್ ಪಡೆದಿದ್ದಾರೆ.
ಈ ಬಾರಿ ಸರ್ಕಾರಿ ಕಾಲೇಜುಗಳ ಕಡೆಗೆ ಹೆಚ್ಚಿನ ಗಮನ ನೀಡಲಾಗಿತ್ತು. ಹೀಗಾಗಿ ಶೇಕಡಾವಾರು ಫಲಿತಾಂಶ ವೃದ್ಧಿಯಾಗಿದೆ. ಆದರೆ ರ್ಯಾಂಕ್ ಪಟ್ಟಿಯಲ್ಲಿ ಎರಡು ಸ್ಥಾನ ನಷ್ಟವಾಗಿರುವುದು ಬೇಸರ ತರಿಸಿದೆ. ಮತ್ತಷ್ಟು ಸಾಧನೆಗೆ ಪ್ರಯತ್ನ ಮುಂದುವರಿಯಲಿದೆ.ಪಾಲಾಕ್ಷ, ಡಿಡಿಪಿಯು
ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿ ಮರುಮೌಲ್ಯ ಮಾಪನಕ್ಕೆ ಅರ್ಜಿ ಸಲ್ಲಿಸುವ ವಿವರ:
ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಏ.10 ರಿಂದ ಏ.16ರ ವರೆಗೆ ಅವಕಾಶವಿದ್ದು ಪ್ರತಿ ವಿಷಯಕ್ಕೆ ₹530 ನಿಗದಿಪಡಿಸಲಾಗಿದೆ. ಉತ್ತರ ಪತ್ರಿಕೆ ಸ್ಕ್ಯಾನಿಂಗ್ ಪ್ರತಿ ಡೌನ್ಲೋಡ್ ಮಾಡಿಕೊಳ್ಳಲು ಏ.14 ರಿಂದ ಮೇ 19 ರ ವರೆಗೆ ಅವಕಾಶವಿದ್ದು ಯಾವುದೇ ಶುಲ್ಕ ನಿಗದಿಯಾಗಿರುವುದಿಲ್ಲ. ಮರು ಮೌಲ್ಯಮಾಪನಕ್ಕಾಗಿ ಹಾಗೂ ಮರು ಎಣಿಕೆಗಾಗಿ ಅರ್ಜಿ ಸಲ್ಲಿಸಲು (ಸ್ಕ್ಯಾನಿಂಗ್ ಪ್ರತಿ ಪಡೆದವರಿಗೆ ಮಾತ್ರ ಅವಕಾಶ) ಏ.15 ರಿಂದ ಏ.20 ರವರೆಗೆ ಅವಕಾಶವಿದ್ದು ಪ್ರತಿ ವಿಷಯಕ್ಕೆ ₹1670 ಶುಲ್ಕವಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ಆನ್ಲೈನ್ ಪೋರ್ಟಲ್ನಲ್ಲಿ ಅಪ್ಡೇಟ್ ಮಾಡಲು ದಂಡ ರಹಿತ ಏ.16 ಕೊನೆ ದಿನವಾಗಿದೆ. ದಂಡ ಸಹಿತ ಪೂರಕ ಪರೀಕ್ಷೆಗೆ ಏ.17 ರಿಂದ 18 ರವರೆಗೆ (ದಿನಕ್ಕೆ ₹50 ರಂತೆ) ಕಾಲಾವಕಾಶ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.