ಹರಪನಹಳ್ಳಿ: ಸೋಮವಾರ ಸಂಜೆ ಸುರಿದ ಭಾರಿ ಮಳೆಗೆ ಕಂಚಿಕೇರಿ– ಬೆಂಡಿಗೆರೆ– ದಾವಣಗೆರೆ ರಸ್ತೆಯ ರೈಲ್ವೆ ಅಂಡರ್ಪಾಸ್ ಜಲಾವೃತವಾಗಿದ್ದು, ವಾಹನಗಳ ಸಂಚಾರ ಐದಾರು ತಾಸು ಸ್ಥಗಿತಗೊಂಡಿತು.
ಕಂಚಿಕೆರೆ– ಬೆಂಡಿಗೆರೆ ಮಾರ್ಗವಾಗಿ ದಾವಣಗೆರೆ ತಲುಪುವ ಈ ಅಂಡರ್ಪಾಸ್ ರೈಲು ನಿಲ್ದಾಣದ ಬಳಿಯಿದೆ. ಈ ರಸ್ತೆಯ ಮೂಲಕ ಕೇವಲ 45 ಕಿ.ಮೀ ಕ್ರಮಿಸಿ ದಾವಣಗೆರೆ ತಲುಪಬಹುದಾದ್ದರಿಂದ ಹರಪನಹಳ್ಳಿ ಮೂಲಕ ದಾವಣಗೆರೆಗೆ ಹೋಗುವ ಪ್ರಯಾಣಿಕರು ಇದೇ ರಸ್ತೆ ಅವಲಂಬಿಸಿದ್ದಾರೆ.
ಈ ದಾರಿ ಸ್ಥಗಿತಗೊಂಡರೆ ದಾವಣಗೆರೆಯಿಂದ ಹರಿಹರ ಮಾರ್ಗದಲ್ಲಿ 60 ಕಿ.ಮೀ ಕ್ರಮಿಸಬೇಕು. ಅಥವಾ ಉಚ್ಚಂಗಿದುರ್ಗ, ಅರಸೀಕೆರೆ ರಸ್ತೆ ಮೂಲಕ ಸಂಚರಿಸಬೇಕು.
ಮಳೆ ನೀರು ಹರಿದುಹೋಗಲು ವೈಜ್ಞಾನಿಕ ಕಾಲುವೆ ನಿರ್ಮಿಸದೇ ಇರುವುದರಿಂದ ಮಳೆ ಬಂದಾಗಲೆಲ್ಲಾ ಇಲ್ಲಿ ಹಳ್ಳ ಸೃಷ್ಟಿಯಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಸೋಮವಾರ ಸಂಜೆ ಹರಿಯುತ್ತಿದ್ದ ನೀರಿನಲ್ಲಿ ಚಲಾಯಿಸಲು ಹೋದ ಕಾರು, ಬೈಕ್ಗಳು ಕೆಟ್ಟುನಿಂತಿವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.