ಕಂಪ್ಲಿ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಂಗಳವಾರ ರಾತ್ರಿ 1.76ಸೆಂ.ಮೀ ಮಳೆಯಾಗಿದ್ದು, ತಾಲ್ಲೂಕಿನ ಮೆಟ್ರಿ ಗ್ರಾಮದ ಜಿ.ಅನ್ನಪೂರ್ಣಮ್ಮ ಜಲಂಧರಗೌಡ ಅವರಿಗೆ ಸೇರಿದ ಮಣ್ಣಿನ ಮನೆ ಚಾವಣಿ ಕುಸಿದಿದೆ.
ಕುಟುಂಬದವರು ಮುಂಜಾಗ್ರತೆಯಾಗಿ ಸ್ಥಳಾಂತರಗೊಂಡಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಹಶೀಲ್ದಾರ್ ಶಿವರಾಜ ತಿಳಿಸಿದರು.
ಬುಧವಾರ ಇಡೀ ದಿನ ಬಿಟ್ಟೂಬಿಡದೆ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಕಣ್ಣಾಮುಚ್ಚಾಲೆ ಸಾಮಾನ್ಯವಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರು ದೊರೆಯದೆ ಜನರ ಪರದಾಟ ಮುಂದುವರಿದಿತ್ತು.
ಗೋಕಟ್ಟೆ, ಹಳ್ಳಗಳು ತುಂಬಿ ಹರಿಯುತ್ತಿದ್ದವು. ತಗ್ಗು ಪ್ರದೇಶದಲ್ಲಿ ನೀರು ನಿಂತಿರುವುದು ಮತ್ತು ರಸ್ತೆಗಳು ಕೆಸರಮಯ ಆಗಿರುವುದರಿಂದ ಜನರ ಸಂಚಾರಕ್ಕೆ ಅಡಚಣೆಯಾಗಿತ್ತು. ಮಳೆಯಿಂದ ಪಟ್ಟಣದ ವಿವಿಧ ಮಾರುಕಟ್ಟೆಯಲ್ಲಿ ಸಾರ್ವಜನಿಕರ ಸಂಚಾರವು ವಿರಳವಾಗಿತ್ತು.
ಕಳೆದ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ತುಂಗಭದ್ರಾ ಕಾಲುವೆ ನೀರು ಆಧಾರಿತ ಹೊಲ ಗದ್ದೆಗಳಲ್ಲಿ ಮುಂಗಾರು ಪೂರ್ವ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ ಎಂದು ರೈತರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.