ತೋರಣಗಲ್ಲು: ಹೋಬಳಿಯ ಹೊಸದರೋಜಿ ಕೆರೆಯ ಬಳಿ ರಸ್ತೆಯ ಪಕ್ಕದಲ್ಲಿನ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ದೇವಲಾಪುರ ಗ್ರಾಮದ ದುರುಗಪ್ಪ(30) ಮೃತ ಯುವಕ. ಕುಡತಿನಿ ಕಡೆಯಿಂದ ದೇವಲಾಪುರ ಗ್ರಾಮಕ್ಕೆ ತೆರಳುವ ವೇಳೆ ಬೈಕ್ ವೇಗವಾಗಿ ಚಲಾಯಿಸಿದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಕುಡತಿನಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಅಪಾಯಕಾರಿ ವಿದ್ಯುತ್ ಕಂಬಗಳು: ಹೊಸದರೋಜಿ ಕೆರೆ ಏರಿಯ ಬಳಿ ಚಿಕ್ಕದಾದ ರಸ್ತೆಯ ಪಕ್ಕದಲ್ಲಿ ಸುಮಾರು ಏಳು ವಿದ್ಯುತ್ ಕಂಬಗಳು ಇದ್ದು ಅವುಗಳಿಂದ ನಿರಂತರವಾಗಿ ಬೈಕ್ ಸೇರಿದಂತೆ ಇತರೆ ವಾಹನಗಳ ಅಪಘಾತಗಳು ಸಂಭವಿಸುತ್ತಿವೆ.
ಕಳೆದ ತಿಂಗಳು ಇದೇ ಸ್ಥಳದಲ್ಲಿ ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದರು. ಎರಡನೇ ಬಾರಿಯೂ ಸಹ ಅದೇ ಸ್ಥಳದಲ್ಲಿ ಮತ್ತೋಂದು ಘಟನೆ ಸಂಭವಿಸಿ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಈ ರಸ್ತೆಯಲ್ಲಿ ನಿತ್ಯ ಸವಾರರು ಪ್ರಾಣಭಯದಲ್ಲೆ ಸಂಚರಿಸಬೇಕಾಗಿದೆ.
‘ದರೋಜಿ ಕೆರೆಯ ಬಳಿಯ ರಸ್ತೆಯ ಬದಿಯಲ್ಲಿನ ಒಟ್ಟು ಏಳು ವಿದ್ಯುತ್ ಕಂಬಗಳು ಅಪಾಯವನ್ನು ಆಹ್ವಾನಿಸುತ್ತಿದ್ದು, ಸಾರ್ವಜನಿಕರ ಸಂಚಾರದ ಅನುಕೂಲಕ್ಕಾಗಿ ಅವುಗಳನ್ನು ತ್ವರಿತವಾಗಿ ತೆರವುಗೊಳಿಸಲು ಸೂಕ್ತ ಕ್ರಮ ವಹಿಸಲಾಗುವುದು’ ಎಂದು ಸಂಡೂರು ತಾಲ್ಲೂಕಿನ ಕೆಇಬಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಎ.ಉಮೇಶ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.