ADVERTISEMENT

‘ವಾಷಿಂಗ್‌ ಮಷಿನ್‌’ನಲ್ಲಿರುವ ರೆಡ್ಡಿಯಿಂದ ಪಾದಯಾತ್ರೆ ಸರಿಯೇ?: ಟಪಾಲ್‌ ಗಣೇಶ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:07 IST
Last Updated 4 ಆಗಸ್ಟ್ 2024, 16:07 IST
ಟಪಾಲ್‌ ಗಣೇಶ್
ಟಪಾಲ್‌ ಗಣೇಶ್   

ಬಳ್ಳಾರಿ: ‘ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಅವರು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಭ್ರಷ್ಟಾಚಾರದ ಆರೋಪ ಮಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಾಗಿದೆ’ ಎಂದು ಗಣಿ ಉದ್ಯಮಿ, ಕಾಂಗ್ರೆಸ್‌ ಮುಖಂಡ ಟಪಾಲ್‌ ಗಣೇಶ್‌ ವ್ಯಂಗ್ಯವಾಡಿದ್ದಾರೆ. 

ಹೇಳಿಕೆ ಬಿಡುಗಡೆ ಮಾಡಿರುವ ಅವರು,  ‘ಭ್ರಷ್ಟಾಚಾರದಲ್ಲಿ ನೊಬೆಲ್ ಪ್ರಶಸ್ತಿ ಇದ್ದರೆ ಇವರಿಗೇ ನೀಡಬೇಕು. ಅಕ್ರಮ ಗಣಿಗಾರಿಕೆಯಿಂದ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ. ಆಂಧ್ರ ಪ್ರದೇಶದಿಂದ ಪರವಾನಿಗೆ ಪಡೆದು ಓಬಳಾಪುರಂ ಮೈನಿಂಗ್ ಕಂಪನಿ ಸ್ಥಾಪಿಸಿ, ಕರ್ನಾಟಕದ ಭೂಬಾಗವನ್ನು ಒತ್ತುವರಿ ಮಾಡಿದ್ದರು. ಕರ್ನಾಟಕ ಸಂಪತ್ತನ್ನು ಲೂಟಿ ಹೊಡೆದಿದ್ದರು. ಆಂಧ್ರ ಪರ್ಮಿಟ್ ಮೂಲಕ ಅದಿರು ಸಾಗಾಣೆ ಮಾಡಿ ಸಾವಿರಾರು ಕೋಟಿ ಸಂಪಾದನೆ ಮಾಡಿದರು. ಇಂಥ ವ್ಯಕ್ತಿಗಳು ಇಂದು ಪಾದಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ದುರ್ದೈವ‘ ಎಂದಿದ್ದಾರೆ. 

‘ಇಬ್ಬರ ಮೇಲೂ ಸಾಕಷ್ಟು ಪ್ರಕರಣಗಳು ಇವೆ. ಇಂಥವರು ತಾವು ಹರಿಶ್ಚಂದ್ರರ ಮಕ್ಕಳು ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಬಿಜೆಪಿಯ ‘ವಾಷಿಂಗ್ ಮಷಿನ್‌’ನಲ್ಲಿರುವರು ಪಾದಯಾತ್ರೆ ನಡೆಸುವುದು ಸರಿಯೇ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.