ADVERTISEMENT

ಬಳ್ಳಾರಿ: ದಾಖಲೆ ಪರಿಶೀಲನೆ ಬಳಿಕ ದರ್ಶನ್‌ಗೆ ‘ಸರ್ಜಿಕಲ್ ಚೇರ್’

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 3:03 IST
Last Updated 2 ಸೆಪ್ಟೆಂಬರ್ 2024, 3:03 IST
ದರ್ಶನ್
ದರ್ಶನ್   

ಬಳ್ಳಾರಿ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ ದರ್ಶನ್‌ಗೆ 'ಸರ್ಜಿಕಲ್ ಚೇರ್' ನೀಡಲು ಕಾರಾಗೃಹ ಇಲಾಖೆ ಒಪ್ಪಿದೆಯಾದರೂ ದಾಖಲೆ ಪರಿಶೀಲನೆ ಬಳಿಕ ತೀರ್ಮಾನ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ದರ್ಶನ್ ಅವರಿಗೆ ಬೆನ್ನು ಮೂಳೆ (ಎಲ್ -5) ನಲ್ಲಿ ಸಮಸ್ಯೆ ಇರುವ ಬಗ್ಗೆ ಮತ್ತು ಹಿಂದೊಮ್ಮೆ ಆಗಿದ್ದ ಕೈ ಮುರಿತದ ನೋವು ಇನ್ನೂ ಇರುವ ಬಗ್ಗೆ ಕುಟುಂಬಸ್ಥರು ಬಳ್ಳಾರಿ ಕೇಂದ್ರ ಕಾರಾಗೃಹದ ಅಧಿಕಾರಿಗಳಿಗೆ ದಾಖಲೆಗಳನ್ನು ಸಲ್ಲಿಸಿ, ಶೌಚಕ್ಕೆ 'ಸರ್ಜಿಕಲ್ ಚೇರ್' ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ. ಅದರ ಪರಿಶೀಲನೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

'ಕೆಲವು ಜೈಲುಗಳಲ್ಲಿ ‘ವೆಸ್ಟರ್ನ್ ಕಮೋಡ್'(ಪಾಶ್ಚಾತ್ಯ ಮಾದರಿ ಶೌಚಾಲಯ)  ಇದೆ. ಇಲ್ಲಿಯೂ ಒದಗಿಸಬಹುದು. ಆದರೆ, ಜೈಲಿನ ಎಲ್ಲ ಕೈದಿಗಳು 'ಇಂಡಿಯನ್ ಕಮೋಡ್' ಅನ್ನೇ ಬಳಸುತ್ತಿರುವಾಗ ದರ್ಶನ್ ಗೆ ಮಾತ್ರ ವೆಸ್ಟರ್ನ್ ಕಮೋಡ್ ನೀಡುವುದು ತಾರತಮ್ಯವಾಗಲಿದೆ. ಹಾಗಾಗಿ ವೆಸ್ಟರ್ನ್ ಕಮೋಡ್ ವ್ಯವಸ್ಥೆ ಒದಗಿಸುತ್ತಿಲ್ಲ' ಎಂದು ಕಾರಾಗೃಹ ಇಲಾಖೆಯ ಉತ್ತರ ವಲಯ ಉಪಮಹಾ ನಿರೀಕ್ಷಕ ಟಿ. ಪಿ ಶೇಷ 'ಪ್ರಜಾವಾಣಿ'ಗೆ ತಿಳಿಸಿದರು.

ADVERTISEMENT

ಇನ್ನೊಂದೆಡೆ, ಹೊರ ವಿಶೇಷ ಭದ್ರತಾ ಕೊಠಡಿಯಲ್ಲಿ ಪ್ರತ್ಯೇಕ ವಾಗಿರುವ ದರ್ಶನ್ ತಮ್ಮೊಂದಿಗೆ ಮಾತನಾಡಲು ಯಾರೂ ಇಲ್ಲದಿರುವ ಬಗ್ಗೆ ಸಿಬ್ಬಂದಿಯೊಂದಿಗೆ ಬೇಸರ ತೋಡಿಕೊಂಡಿದ್ದಾರೆ
ಎನ್ನಲಾಗಿದೆ.

ಕೈದಿಗಳಿಂದ ಪ್ರತಿಭಟನೆ ನಡೆದಿಲ್ಲ: ಡಿಐಜಿ

ಬೆಳಗಾವಿ: ‘ತಾಲ್ಲೂಕಿನ ಹಿಂಡಲಗಾದ ಕೇಂದ್ರೀಯ ಕಾರಾಗೃಹದಲ್ಲಿ ಇರುವ ಕೈದಿಗಳು ತಮಗೆ ಬೀಡಿ, ಸಿಗರೇಟ್, ತಂಬಾಕು ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಅವುಗಳನ್ನು ಕೊಡುವವರೆಗೆ ಉಪಾಹಾರ ಸೇವಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ’ ಎಂಬ ಮಾಹಿತಿ ಭಾನುವಾರ ಸಾಮಾಜಿಕ
ಜಾಲತಾಣಗಳಲ್ಲಿ ಇಡೀ ದಿನ ಹರಿದಾಡಿತು.

‘ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ದರ್ಶನ್‌ ಸಿಗರೇಟ್‌ ಸೇದಿರುವ ಹಿನ್ನೆಲೆಯಲ್ಲಿ ಇಲ್ಲಿಯೂ ಅವನ್ನೆಲ್ಲ ಒದಗಿಸಬೇಕು’ ಎಂದು ಕೈದಿಗಳು ಒತ್ತಾಯಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾರಾಗೃಹ ಇಲಾಖೆ ಉತ್ತರ ವಲಯದ ಡಿಐಜಿ ಟಿ.ಪಿ.ಶೇಷ, ‘ಬೀಡಿ, ಸಿಗರೇಟ್, ತಂಬಾಕು ನೀಡುವಂತೆ ಹಿಂಡಲಗಾ ಜೈಲಿನಲ್ಲಿ ಯಾರೂ ಪ್ರತಿಭಟನೆ ನಡೆಸಿಲ್ಲ. ಉಪಾಹಾರ ಸೇವನೆಯನ್ನೂ ತಿರಸ್ಕರಿಸಿಲ್ಲ. ವಾತಾವರಣ ಎಂದಿನಂತಿದೆ’ ಎಂದು
ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.