ಬಳ್ಳಾರಿ: ‘ಸಂಡೂರು ವಿಧಾನಸಭಾ ಉಪಚುನಾವಣೆಯ ಟಿಕೆಟ್ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಬಹುತೇಕ ಅಂತಿಮಗೊಂಡಿದೆ. ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ’ ಎಂದು ಮೂಲಗಳು ತಿಳಿಸಿವೆ.
ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದ ತುಕಾರಾಂ ದಂಪತಿ ಈ ಕುರಿತು ಚರ್ಚಿಸಿದ್ದಾರೆ.
ಸಂಡೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದ ಎನ್.ವೆಂಕಣ್ಣ ಎಂಬುವರು ಸೋಮವಾರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು. ತಮಗೆ ಟಿಕೆಟ್ ನೀಡುವಂತೆ ವೆಂಕಣ್ಣ ಅವರು ಪೂರ್ವಭಾವಿ ಸಭೆ ಮತ್ತು ವೀಕ್ಷಕರ ಸಭೆಯಲ್ಲಿ ಮನವಿ ಮಾಡಿದ್ದರು. ಪಕ್ಷ ಇದಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಅವರು ಪಕ್ಷೇತರರಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.
ಈಶಾನ್ಯ ದಿಕ್ಕಿನಿಂದ ಬಿಜೆಪಿ ಪ್ರಚಾರ:
ಸಂಡೂರು ಉಪಚುನಾವಣೆ ಪ್ರಚಾರವನ್ನು ಬಿಜೆಪಿಯು ಕ್ಷೇತ್ರದ ಈಶಾನ್ಯ ದಿಕ್ಕಿನಿಂದ ಆರಂಭಿಸಿದೆ. ಕುರುಗೋಡು ತಾಲ್ಲೂಕಿನ ಏಳುಬೆಂಚಿ ಗ್ರಾಮ ಸಂಡೂರು ವಿಧಾನಸಭೆಗೆ ಸೇರಿದ್ದು, ಇದನ್ನು ಕ್ಷೇತ್ರದ ಈಶಾನ್ಯ ಮೂಲೆ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಭಾನುವಾರ ರಾತ್ರಿ ಶಾಸಕ ಜನಾರ್ದನ ರೆಡ್ಡಿ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ಚೋರನೂರು ಹೋಬಳಿಯಲ್ಲಿ ಸೋಮವಾರ ಪ್ರಚಾರ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.