ಸಂಡೂರು: ತಾಲ್ಲೂಕಿನ ಚೋರನೂರು ಹೋಬಳಿಯ ವಿವಿಧ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಚುನಾವಣಾ ಪ್ರಚಾರ ಮಾಡಿದರು.
ನಿಡಗುರ್ತಿ, 72 ಮಲ್ಲಾಪುರ, ಕೊಂಡಾಪುರ, ಗಿರೇನಹಳ್ಳಿ, ಹುಲಿಕುಂಟೆ, ಉತ್ತರಮಲೈ, ಕಾಟಿನ್ ಕಂಬ,ಬಂಡ್ರಿ,ಗೊಲ್ಲರಹಟ್ಟಿ,ಕೋಡಿಹಳ್ಳಿ,ಕಪಟ್ರಾಳ್,ಹುಚ್ಚೇನಹಳ್ಳಿ,ಎಚ್.ಕೆ.ಹಳ್ಳಿ,ಶ್ರೀರಾಮ ಶೆಟ್ಟಿಹಳ್ಳಿ ,ಸಿ.ಕೆ ಹಳ್ಳಿ ಹಾಗೂ ಜೋಗಿಕಲ್ಲು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.
‘ಸಚಿವ ಸಂತೋಷ್ ಲಾಡ್ ಹಾಗೂ ಸಂಸದ ಇ.ತುಕಾರಾಂ ಅವರು ಕಳೆದ 20 ವರ್ಷಗಳಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಮುಂದೆಯೂ ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. 371(ಜೆ) ವಿಶೇಷ ಮೀಸಲಾತಿ ಮೂಲಕ ಈ ಭಾಗದಲ್ಲಿ ಉದ್ಯೋಗ, ವಿದ್ಯಾಭ್ಯಾಸಕ್ಕೆ ವಿಶೇಷ ಪ್ರಾತಿನಿಧ್ಯ ನೀಡಿದ್ದು ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳ ಮೂಲಕ ನಾಡಿನ ಜನರಿಗೆ ಭರವಸೆಯ ಆಡಳಿತ ನೀಡುತ್ತಿದೆ. ಕಾಂಗ್ರೆಸ್ಗೆ ಮತ ನೀಡುವ ಮೂಲಕ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಕ್ಷಯ ಲಾಡ್ ಮಾತನಾಡಿ, ‘ಈ ಭಾಗದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಪ್ರಚಾರಕ್ಕೆ ಕ್ಷೇತ್ರದಲ್ಲಿ ಓಡಾಡುವಾಗ ಅವರಿಗೆ ಸ್ವಾಗತ ಕೋರುವ ರಸ್ತೆಗಳೇ ಅಭಿವೃ ದ್ಧಿಯನ್ನು ತೋರಿಸುತ್ತಿವೆ’ ಎಂದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಂಡ್ರಿ ರವಿಕುಮಾರ್ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಜಯರಾಂ, ಶೈಲಜಾ ನಿಕ್ಕಂ, ಗಿರೇನಹಳ್ಳಿ ಹೊನ್ನೂರಸ್ವಾಮಿ, ಯಾದಗರ್ ಸಾಬ್, ಬಂಡ್ರಿ ವೀರಯ್ಯ ಸ್ವಾಮಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.