ಸಂಡೂರು (ಬಳ್ಳಾರಿ ಜಿಲ್ಲೆ): ಸಂಡೂರು ಉಪಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ಶಿವಪುರ ಕೆರೆಬಳಿ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮನೆ ಮಾಡಿದ್ದು, ಶುಕ್ರವಾರ ಗೃಹಪ್ರವೇಶ ಮಾಡಿದರು.
ಪತ್ನಿ ಅರುಣಾ ಲಕ್ಷ್ಮಿ, ಮಾಜಿ ಶಾಸಕ ಸೋಮಶೇಖರ ರೆಡ್ಡಿ ಅವರೊಂದಿಗೆ ಪೂಜಾ ಕಾರ್ಯ ನಡೆಸಿದರು. ಈ ಮನೆ ರೆಡ್ಡಿ ಆಪ್ತ, ಬಿಜೆಪಿ ಮುಖಂಡ ರಾಮಗಢ ರಘು ಎಂಬುವವರದ್ದು. ಚುನಾವಣೆಗಾಗಿ ಈ ಮನೆಯನ್ನು ರೆಡ್ಡಿ ಅವರಿಗೆ ತಾತ್ಕಾಲಿಕವಾಗಿ ಬಿಟ್ಟುಕೊಡಲಾಗಿದೆ ಎಂದು ತಿಳಿದುಬಂದಿದೆ.
ನಂತರ ಸಂಸದ ಇ.ತುಕಾರಾಂ ತಂಗಿಯ ಗಂಡ, ಬಿಜೆಪಿ ಟಿಕೆಟ್ ಆಕಾಂಕ್ಷಿ ಬಂಡ್ರಿ ನಾಗರಾಜ್ ಮನೆಗೆ ಭೇಟಿ ನೀಡಿದ ರೆಡ್ಡಿ ಕೆಲ ಹೊತ್ತು ಚರ್ಚಿಸಿದರು. ‘ಸಿದ್ದರಾಮಯ್ಯ 14 ನಿವೇಶನಗಳನ್ನು ಅವರ ಪತ್ನಿ ಹೆಸರಲ್ಲಿ ಪಡೆಯುವುದರ ಜೊತೆಗೆ 100ಕ್ಕೂ ಹೆಚ್ಚು ನಿವೇಶನಗಳನ್ನು ಬೇನಾಮಿ ಹೆಸರಲ್ಲಿ ತೆಗೆದುಕೊಂಡಿದ್ದಾರೆ. ಜಾರಿ ನಿರ್ದೇಶನಾಲಯ, ಸಿಬಿಐ ತನಿಖೆ ನಡೆದರೆ, ಎಲ್ಲವೂ ಬಯಲಾಗುತ್ತದೆ’ ಎಂದು ರೆಡ್ಡಿ ಹೇಳಿದರು.
ವಾಲ್ಮೀಕಿ ಜಯಂತಿ ವೇಳೆ ಶಾಸಕ ನಾಗೇಂದ್ರ ಕಣ್ಣೀರು ಹಾಕಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಾಪ, ಭೀತಿಯ ಕಣ್ಣೀರು ಹಾಕಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.