ಕಂಪ್ಲಿ: ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ಶನಿವಾರ ಪರಿಶಿಷ್ಟ ಜಾತಿಯ ಕೆಲವರು ಮತ್ತು ಪರಿಶಿಷ್ಟ ಪಂಗಡದ ಕೆಲ ಮಂದಿಯ ನಡುವೆ ಘರ್ಷಣೆ, ವಾಗ್ವಾದ ನಡೆದಿದೆ.
ಪರಿಶಿಷ್ಟ ಜಾತಿಗೆ ಸೇರಿದ ಎಚ್. ಹುಲುಗಪ್ಪ ಎಂಬುವವರು ಶನಿವಾರ ಬೆಳಿಗ್ಗೆ ಗ್ರಾಮದ ಆಂಜನೇಯ ದೇಗುಲಕ್ಕೆ ತೆರಳಿದ್ದರು. ಆಗ ದೇವಸ್ಥಾನ ಆವರಣ ಶುಚಿಗೊಳಿಸುತ್ತಿದ್ದ ಪೂಜಾರಿ ವಿಶಾಲಾಕ್ಷಿ, ಸ್ವಲ್ಪ ಕಾಲ ತಡೆದು ಬರುವಂತೆ ಹುಲುಗಪ್ಪ ಅವರಿಗೆ ತಿಳಿಸಿದರು ಎನ್ನಲಾಗಿದೆ.
‘ನಾನು ದೇವಸ್ಥಾನ ಪ್ರವೇಶಿಸುವುದನ್ನು ಉದ್ದೇಶಪೂರ್ವಕವಾಗಿ ತಡೆದಿದ್ದೀರಿ’ ಎಂದು ಆಕ್ರೋಶಗೊಂಡ ಹುಲುಗಪ್ಪ, ಪೂಜಾರಿಯನ್ನು ನಿಂದಿಸಿದರು ಎನ್ನುವ ಆರೋಪ ಕೇಳಿಬಂದಿದೆ.
ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ಎರಡೂ ಸಮುದಾಯಗಳ ನಡುವೆ ಮಾತಿನ ಚಕಮಕಿ ನಡೆದು ಕೆಲವರ ಮೇಲೆ ಹಲ್ಲೆಯೂ ನಡೆಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿದ ಕುರುಗೋಡು ಸಿಪಿಐ ವಿಶ್ವನಾಥ ಹಿರೇಗೌಡರ್, ಕುಡುತಿನಿ ಪಿಎಸ್ಐ ಹುಲಿಗೇಶ ಎಚ್. ಓಂಕಾರ್, ಕುರುಗೋಡು ಪಿಎಸ್ಐ ಸುಪ್ರೀತ್ ಸಿಬ್ಬಂದಿಯೊಂದಿಗೆ ಧಾವಿಸಿ ಗ್ರಾಮದಲ್ಲಿ ಬಂದೋಬಸ್ತ್ ಕೈಗೊಂಡಿದ್ದಾರೆ.
ಕುಡಿತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.