ADVERTISEMENT

ಬಳ್ಳಾರಿ | ಸರಗಳ್ಳರ ಸೆರೆ: ₹17.70 ಲಕ್ಷ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 14:27 IST
Last Updated 13 ಜೂನ್ 2024, 14:27 IST
ಸರಗಳ್ಳರಿಂದ ವಶಕ್ಕೆ ಪಡೆದ ಚಿನ್ನದ ಸರಗಳು ಮತ್ತು ಬೈಕ್‌ ಜೊತೆಗೆ ಜಿಲ್ಲಾ ಪೊಲೀಸ್‌ ಅಧಿಕಾರಿಗಳು
ಸರಗಳ್ಳರಿಂದ ವಶಕ್ಕೆ ಪಡೆದ ಚಿನ್ನದ ಸರಗಳು ಮತ್ತು ಬೈಕ್‌ ಜೊತೆಗೆ ಜಿಲ್ಲಾ ಪೊಲೀಸ್‌ ಅಧಿಕಾರಿಗಳು   

ಬಳ್ಳಾರಿ: ಜಿಲ್ಲೆಯ ವಿವಿಧಡೆ ಸರಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ₹17.70 ಲಕ್ಷ ಮೌಲ್ಯದ 295 ಗ್ರಾಂ ಚಿನ್ನಭರಣ ಹಾಗೂ ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿರ್‌ ಕುಮಾರ್‌ ಬಂಡಾರು ತಿಳಿಸಿದರು.

ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರದ ಹೊರವಲಯ ಗುಡಾರನಗರ ನಿವಾಸಿಗಳಾದ ವೈ.ಎಂ. ಮಂಜು, ರಾಮದಾಸ ಬಂಧಿತರು. ಕಳ್ಳತನ ಎಸಗಿದ ಪ್ರದೇಶಗಳಲ್ಲಿ ಆರೋಪಿಗಳು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದರು. ಮೊಬೈಲ್ ನಂಬರ್ ಜಾಡು ಪತ್ತೆ ಮಾಡಿದಾಗ ಆರೋಪಿಗಳು ಅದೇ ಪ್ರದೇಶದಲ್ಲಿ ಇರುವುದು ಪತ್ತೆಯಾಗಿತ್ತು ಎಂದರು.

ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು, ಗಾಂಧಿನಗರ, ಕೌಲಬಜಾರ್ ತಲಾ ಎರಡು, ತೆಕ್ಕಲಕೋಟೆ, ಬ್ರೂಸ್‌ಪೇಟೆ ಪೊಲೀಸ್ ಠಾಣೆ ತಲಾ ಒಂದು ಸೇರಿ ಒಟ್ಟು ಹತ್ತು ಸರಗಳ್ಳತನ ಆರೋಪದಡಿ ಬಂಧಿತರ ವಿರುದ್ಧ ಪ್ರಕರಣ ದಾಖಲಾಗಿದ್ದವು. ಸರಗಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಿ, ಚಿನ್ನಾಭರಣ ವಶಪಡಿಸಿಕೊಂಡ ವಿಶೇಷ ತಂಡಕ್ಕೆ ಎಸ್ಪಿ ರಂಜಿತ್‌ ಕುಮಾರ್‌ ಬಂಡಾರು ನಗದು ಬಹುಮಾನ ನೀಡಿದರು.

ADVERTISEMENT

ಎಎಸ್ಪಿ ನವೀನ್ ಕುಮಾರ, ಸಿರುಗುಪ್ಪ ಉಪವಿಭಾಗ ಡಿವೈಎಸ್ಪಿ ವೆಂಕಟೇಶ, ಸಿಪಿಐಗಳಾದ ವೈ.ಎಸ್.ಹನುಮಂತಪ್ಪ, ಸತೀಶ್, ಪಿಎಸ್‌ಐ ಪರಶುರಾಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.