ADVERTISEMENT

ಮದುವೆ ದಿಬ್ಬಣದ ಲಾರಿ ಉರುಳಿ ಇಬ್ಬರು ಮಹಿಳೆಯರ ಸಾವು: 30 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 13:36 IST
Last Updated 28 ಏಪ್ರಿಲ್ 2024, 13:36 IST
   

ಬಳ್ಳಾರಿ: ಕುಡಿತಿನಿ ಪಟ್ಟಣದ ಹೊರವಲಯದಲ್ಲಿನ ಎಚ್‌ಎಲ್‌ಸಿ ಕಾಲುವೆಯ ಬಳಿ ಮದುವೆಯ ದಿಬ್ಬಣದ ಲಾರಿಯೊಂದು ಭಾನುವಾರ ಮಗುಚಿದ್ದು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸುಮಾರು 30 ಮಂದಿ ಗಾಯಗೊಂಡಿದ್ದಾರೆ. 

ಸೆರಗು ಗ್ರಾಮದ ಮಾರಮ್ಮ ಸ್ಥಳದಲ್ಲೇ ಮೃತಪಟ್ಟರೆ,  ಬಳ್ಳಾರಿಯ ವಿಮ್ಸ್‌ಗೆ ತೆರಳುವ ಮಾರ್ಗ ಮಧ್ಯದಲ್ಲಿ ಭಾಗ್ಯಮ್ಮ ಎಂಬುವವರು ಕೊನೆಯುಸಿರೆಳೆದಿದ್ದಾರೆ.  

ಸೆರಗು ಗ್ರಾಮದ 35ಕ್ಕೂ ಅಧಿಕ ಮಂದಿ ಭಾನುವಾರ ಆಂಧ್ರಪ್ರದೇಶದ ಕೆರೆನಹಳ್ಳಿ ಗ್ರಾಮದಲ್ಲಿ ನಡೆದ ಮದುವೆಯೊಂದನ್ನು ಮುಗಿಸಿಕೊಂಡು ಹಿಂದಿರುಗುತ್ತಿದ್ದರು. ಈ ವೇಳೆ ದುರ್ಘಟನೆ ನಡೆದಿದೆ. ಚಾಲಕನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  

ADVERTISEMENT

ಗಾಯಗೊಂಡವರಿಗೆ ಕುಡತಿನಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಮ್ಸ್‌ಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಕುರುಗೋಡು ಪಟ್ಟಣದ ಪಿಎಸ್ಐ, ವೀರೇಶಪ್ಪ, ಕುಡುತಿನಿ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. 

ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಕಾಂಗ್ರೆಸ್‌ನ ಲೋಕಸಭಾ ಅಭ್ಯರ್ಥಿ ಇ. ತುಕಾರಾಂ, ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಪಡೆದರು. ನಂತರ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಅವರಿಗೆ ದೂರವಾಣಿ ಕರೆ ಮಾಡಿದ ಅವರು, ಅಗತ್ಯ ಚಿಕತ್ಸೆ ನೀಡುವಂತೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.