ಹೂವಿನಹಡಗಲಿ: ಇಲ್ಲಿನ ಕೋಟೆ ವೀರಭದ್ರೇಶ್ವರ ಸ್ವಾಮಿಯ ಕಾರ್ತಿಕ ಮಹಾಮಂಗಲ ಪ್ರಯುಕ್ತ ಪಟ್ಟಣದಲ್ಲಿ ಸೋಮವಾರ ವಿಜೃಂಭಣೆಯ ಪಲ್ಲಕ್ಕಿ ಉತ್ಸವ ಜರುಗಿತು.
ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಸ್ವಾಮಿಯ ಬೆಳ್ಳಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲಾಯಿತು. ದೇವಸ್ಥಾನದಿಂದ ಆರಂಭವಾದ ಪಲ್ಲಕ್ಕಿ ಉತ್ಸವ ಮುಖ್ಯಬೀದಿಯ ಮೂಲಕ ಶಾಸ್ತ್ರಿ ವೃತ್ತದಲ್ಲಿರುವ ಪಾದಗಟ್ಟೆ ತಲುಪಿ ದೇವಸ್ಥಾನಕ್ಕೆ ಮರಳಿತು. ನಂದಿಕೋಲು, ಸಮಾಳ ಮಂಗಳವಾದ್ಯ ಉತ್ಸವಕ್ಕೆ ಕಳೆ ತಂದಿದ್ದವು. ಸ್ಥಳೀಯ ಪುರವಂತರು ವೀರಭದ್ರೇಶ್ವರ ಸ್ವಾಮಿಯ ಪವಾಡ ಒಡಪುಗಳನ್ನು ನುಡಿದರು. ಉತ್ಸವದಲ್ಲಿ ಪಟ್ಟಣದ ಭಕ್ತರು ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು.
ರುದ್ರಾಭಿಷೇಕ ಮತ್ತು ಕಾರ್ತಿಕ ಮಹಾಮಂಗಲ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಿಗ್ಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಎಚ್.ಎಂ.ವೀರಯ್ಯ ಪೌರೋಹಿತ್ಯ ನೆರವೇರಿಸಿದರು. ಮಧ್ಯಾಹ್ನ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ಜರುಗಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಹೊಂಬಾಳೆ ಕೊಟ್ರೇಶ, ಉಪಾಧ್ಯಕ್ಷ ಅರವಳ್ಳಿ ಮಲ್ಲಪ್ಪ, ಕಾರ್ಯದರ್ಶಿ ವೀರಣ್ಣ ಕೌಲೂರು, ಖಜಾಂಚಿ ಜಗದೀಶ ಮಲ್ಕಿ ಒಡೆಯರ್, ಮುಖಂಡರಾದ ಕೋಡಿಹಳ್ಳಿ ಮುದುಕಪ್ಪ, ಕೆ.ರುದ್ರಪ್ಪ ಹಾಗೂ ಸಮಿತಿಯ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನದಲ್ಲಿ ಸಂಜೆ ದೀಪೋತ್ಸವ ಹಾಗೂ ಧರ್ಮಸಭೆ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.