ಸಂಡೂರು: ‘ಬಳ್ಳಾರಿಯ ಸಂಸದರಾಗಿದ್ದ ದಿ.ಕೆ.ಎಸ್ ವೀರಭದ್ರಪ್ಪನವರು ಆರಂಭಿಸಿದ ವೆಸ್ಕೊ ಫೌಂಡೇಷನ್ ಸುಮಾರು 25 ವರ್ಷಗಳಿಂದ ನಿರಂತರವಾಗಿ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತ ಬಂದಿದೆ’ ಎಂದು ಕಂಪನಿಯ ಹಿರಿಯ ಅಧಿಕಾರಿ ಬಿ.ಎಸ್.ಬೊಮ್ಮಯ್ಯ ತಿಳಿಸಿದರು.
ತಾಲ್ಲೂಕಿನ ಜಯಸಿಂಗಾಪುರ ಗ್ರಾಮದಲ್ಲಿ ಫೌಂಡೇಷನ್ ವತಿಯಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಶುಕ್ರವಾರ ಪುಸ್ತಕ, ಬ್ಯಾಗ್ ಹಾಗೂ ಇತರೆ ಪರಿಕರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಸುಮಾರು ₹21 ಲಕ್ಷವನ್ನು ಶಿಕ್ಷಣ ಕ್ಷೇತ್ರಕ್ಕೆ ವಿನಿಯೋಗಿಸಲಿದ್ದೇವೆ. ಎಸ್ಎಸ್ಎಲ್ಸಿ, ಪಿಯುಸಿ, ಪದವಿ ತರಗತಿಗಳ ಬಡ ವಿದ್ಯಾರ್ಥಿಗಳ ಶಾಲಾ ಶುಲ್ಕ ಕಟ್ಟುವುದನ್ನೂ ಫೌಂಡೇಷನ್ ಮುಂದುವರಿಸಿಕೊಂಡು ಹೋಗುತ್ತಿದೆ’ ಎಂದರು.
ಸಿಆರ್ಪಿ ಶೇಖರ್ ಪಾಟೀಲ್ ಮಾತನಾಡಿ, ‘ದೇಶದಾದ್ಯಂತ 3 ಲಕ್ಷ ಸರ್ಕಾರಿ ಶಾಲೆಗಳಿವೆ. ಗಣಿ ಕಂಪನಿಗಳು ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳು ಕುಡಿಯುವ ನೀರು, ಶೌಚಾಲಯ, ಕೊಠಡಿಗಳನ್ನು ಒದಗಿಸುವ ಮೂಲಕ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸಬೇಕು‘ ಎಂದರು.
ಕಂಪನಿಯ ಅಧಿಕಾರಿ ಶಶಿಧರ ಮಂದಾಲ್, ಪ್ರಭಾರ ಮುಖ್ಯ ಶಿಕ್ಷಕ ರಾಜಣ್ಣ, ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಂಬಣ್ಣ, ಗ್ರಾಮದ ಭಜನೆ ಹುಲುಗಪ್ಪ, ನಾಗರಾಜಪ್ಪ, ಗ್ರಾಮ ಪಂಚಾಯ್ತಿ ಸದಸ್ಯ ರವಿನಾಯಕ ಮಾತನಾಡಿದರು. ವೆಸ್ಕೊ ಕಂಪನಿ ವ್ಯವಸ್ಥಾಪಕ ಕೆ.ಎಸ್. ಚೆನ್ನಬಸಪ್ಪ, ಎಸ್ಡಿಎಂಸಿ ಅಧ್ಯಕ್ಷ ಹನುಮಂತಪ್ಪ, ಶಿಕ್ಷಕಿ ಗಂಗಾಭವಾನಿ, ಬಸಪ್ಪ, ಕುಮಾರಸ್ವಾಮಿ, ಕಲ್ಲಪ್ಪ, ಶ್ರೀಧರ, ಶಿಕ್ಷಕಿ ಸೌಮ್ಯಾ, ಶಿಕ್ಷಕರಾದ ಕರುಣಾ, ಸಣ್ಣ ನಿಂಗಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.