ಬಳ್ಳಾರಿ: ಗರ್ಭಿಣಿಯೊಬ್ಬರಿಗೆ ಸರಿಯಾಗಿ ಸ್ಕ್ಯಾನಿಂಗ್ ಮಾಡದೇ ತಪ್ಪಾದ ವರದಿ ನೀಡಿದ್ದ ನಗರದ ಪ್ರಸೂತಿ ತಜ್ಞೆ ಡಾ.ಪರಿಮಳಾ ದೇಸಾಯಿ ಅವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ₹2,50,000 ದಂಡ ವಿಧಿಸಿದೆ. ಇದರ ಜತೆಗೆ ಬಡ್ಡಿಯನ್ನು ಸೇರಿಸಿ ಸಂತ್ರಸ್ತರಿಗೆ ಪಾವತಿಸುವಂತೆ ತಿಳಿಸಿದೆ.
ಬಳ್ಳಾರಿ ತಾಲೂಕಿನ ಬ್ಯಾಲಚಿಂತೆ ಗ್ರಾಮದ ಸುಮಂಗಳಾ ಎಂಬುವವರು ನಗರದ ಸಂಗನಕಲ್ಲು ರಸ್ತೆಯ ಕೆ.ಬಿ.ವೃತ್ತದಲ್ಲಿ ಇರುವ ಪ್ರಸೂತಿ ತಜ್ಞೆ ಡಾ.ಪರಿಮಳ ದೇಸಾಯಿ ಬಳಿ 2022ರ ಡಿ.10 ರಂದು ಸ್ಕ್ಯಾನಿಂಗ್ ಮಾಡಿಸಿದ್ದರು. ಮಗುವಿಗೆ ಏನೂ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದ್ದರು.
ಸುಮಂಗಳ ಅವರು, 2023 ರ ಫೆ.30 ರಂದು ಮೋಕಾದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ಮಗುವಿನ ಬೆನ್ನಿನ ಕೆಳ ಭಾಗದಲ್ಲಿ ಮೈಲೋಮೆನಿಂಗೊಸೆಲ್ (ಗೆಡ್ಡೆ) ಬೆಳೆದಿರುವುದು ಕಂಡುಬಂದಿತ್ತು. ವೈದ್ಯರು 22 ಮತ್ತು 32ನೇ ವಾರದಲ್ಲಿ ಸರಿಯಾಗಿ ಸ್ಕ್ಯಾನಿಂಗ್ ಮಾಡಿ ಮೈಲೋಮೆನಿಂಗೊಸೆಲ್ ಬೆಳೆದಿರುವುದನ್ನು ಪತ್ತೆ ಹಚ್ಚಿದ್ದರೆ, ಮಗುವಿಗೆ ಗರ್ಭದಲ್ಲಿದ್ದಾಗಲೇ ಚಿಕಿತ್ಸೆ ಕೊಡಿಸುವ ಅವಕಾಶವಿತ್ತು ಎನ್ನಲಾಗಿದೆ.
ಹೆಣ್ಣು ಮಗುವಿಗೆ ನಂತರ ಒಂದು ಕಾಲು ದೊಡ್ಡದು ಮತ್ತೊಂದು ಸಣ್ಣದಾಗಿದ್ದು, ನಿಲ್ಲಲು, ಕೂರಲು ಕಷ್ಟವಾಗುತ್ತಿದೆ. ಹೀಗಾಗಿ ಮಗುವಿಗೆ ವೈದ್ಯೋಪಚಾರಕ್ಕೆ ₹5,00,000 ಪರಿಹಾರ ಕೊಡಿಸುವಂತೆ ಸುಮಂಗಳಾ ಅವರು ಜಿಲ್ಲಾ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಸರಿಯಾದ ರೀತಿಯಲ್ಲಿ ಸ್ಕ್ಯಾನಿಂಗ್ ಮಾಡದೇ ನಿರ್ಲಕ್ಷ ಎಸಗಿದ್ದಕ್ಕಾಗಿ ₹2,50,000 ಪರಿಹಾರವನ್ನು ಪರಿಮಳಾ ಅವರು ಸುಮಂಗಲಾರವರಿಗೆ ನೀಡಬೇಕು ಎಂದು ಆದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.