ADVERTISEMENT

ಕುಕನೂರು: ಹೆಸರು ಬೆಳೆಗೆ ಹಳದಿ ರೋಗದ ಕಾಟ

ಮಂಜುನಾಥ ಅಂಗಡಿ
Published 23 ಜೂನ್ 2024, 4:59 IST
Last Updated 23 ಜೂನ್ 2024, 4:59 IST
   

ಕುಕನೂರು: ತಾಲ್ಲೂಕಿನ ವ್ಯಾಪ್ತಿಯ ನೂರಾರು ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಹೆಸರು ಬಿತ್ತನೆ ಮಾಡಿದ್ದು, ಹಳದಿ ನಂಜಾಣು ರೋಗ ಕಾಣಿಸಿಕೊಂಡು ರೈತರಲ್ಲಿ ಆತಂಕ ಮನೆಮಾಡಿದೆ.

ಹೆಸರು ಬೆಳೆಯ ಎಲೆಯ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಂಡು ಬರುತ್ತಿದ್ದು, ನಂತರ ಜಮೀನಿನಲ್ಲಿ ಬಿತ್ತಿದ ಹೆಸರು ಬೆಳೆ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಬಾರದೇ ನಾಶವಾಗುವ ಅಪಾಯವಿದೆ.

ತಾಲ್ಲೂಕಿನ ಯರೆಹಂಚಿನಾಳ, ಕುಕನೂರು, ಬಿನ್ನಾಳ, ಭಾನಾಪುರ, ಚಿಕನಕೊಪ್ಪ, ಮಸಬಹಂಚಿನಾಳ ಹೀಗೆ ಅನೇಕ ಪ್ರದೇಶಗಳಲ್ಲಿ ಹಳದಿ ಹಾಗೂ ಚುಕ್ಕೆ ರೋಗ ಪ್ರಾರಂಭವಾಗಿದ್ದು, ರೈತರು ರಾಸಾಯನಿಕ ಸಿಂಪಡಣೆ ಮಾಡುತ್ತಿದ್ದಾರೆ.

ADVERTISEMENT

‘ಹಳದಿ ನಂಜಾಣು ರೋಗಕ್ಕೆ ಬಿಳಿನೊಣ ಕಾರಣವಾಗಿದ್ದು, ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹೋಗಿ ರಸ ಹೀರುವುದರಿಂದ ಈ ವೈರಾಣು ಗಿಡದಿಂದ ಗಿಡಕ್ಕೆ ಹರಡುತ್ತದೆ. ಇದನ್ನು ಪ್ರಾರಂಭದಲ್ಲೇ ನಿಯಂತ್ರಿಸಿದರೆ ಉತ್ತಮ ಫಸಲು ಬರಲು ಸಾಧ್ಯ’ ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.

‘ಹೊಲದಲ್ಲಿ ರೋಗ ಕಾಣಿಸಿಕೊಂಡ ಗಿಡಗಳನ್ನು ತಕ್ಷಣ ರೈತರು ಕಿತ್ತು ನೆಲದಲ್ಲಿ ಹೂಳಬೇಕು ಅಥವಾ ಸುಡಬೇಕು. ಪ್ರಾರಂಭದಲ್ಲೇ ಕೀಟನಾಶಕ ಬಳಕೆ ಮಾಡಬೇಕು. ಡೈಮಿಥೋಯೆಟ್ 1.5 ಮಿ.ಲೀ ಪ್ರತಿ ಲೀಟರ್ ಅಥವಾ ಇಮಿಡಾಕ್ಲೋವಿಡ್ 1 ಮಿ.ಲೀ, 1 ಲೀಟರ್ ನೀರಿಗೆ ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು ಹಾಗೂ ಹಳದಿ ಅಂಟು ಬಲೆಯನ್ನು1 ಎಕರೆ ಪ್ರದೇಶದಲ್ಲಿ ಆರು ಕಡೆ ಅಳವಡಿಸಬೇಕು. ಇದನ್ನು ಮಾಡಿದರೆ ರೋಗ ನಿಯಂತ್ರಣಕ್ಕೆ ಬರುತ್ತದೆ’ ಎಂದರು.

ಹೆಸರು ಬೆಳೆಗೆ ಹಳದಿ ನಂಜಾಣು ರೋಗ ಕಾಣಿಸಿಕೊಂಡರೆ ಔಷಧ ಸಿಂಪಡಣೆ ಮಾಡುವ ಮೂಲಕ ನಿಯಂತ್ರಣಕ್ಕೆ ತರಬೇಕು. ಇಲ್ಲದಿದ್ದರೆ ಇಳುವರಿ ಕುಂಠಿತವಾಗುತ್ತದೆ.
ಪ್ರಾಣೇಶ್ ಹಾದಿಮನಿ, ತಾಲ್ಲೂಕು ಕೃಷಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.