ತೋರಣಗಲ್ಲು: ಜಿಂದಾಲ್ ಕಾರ್ಖಾನೆಯಲ್ಲಿ ಬಿಸಿ ನೀರು ಹರಿಸುವ ಪೈಪ್ ಲೈನ್ ದುರಸ್ತಿ ಕಾರ್ಯನಿರತ ಮೂರು ಜನ ಯುವ ಎಂಜಿನಿಯರ್ಗಳ ಸಾವಿಗೆ ಕಾರಣರಾದ ಜಿಂದಾಲ್ ಕಾರ್ಖಾನೆಯ ಅಧ್ಯಕ್ಷ ಪಿ.ಕೆ.ಮುರುಗನ್, ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಸಂಜಯ್ ಹಂಡೂರಾ ಅವರ ಮೇಲೆ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ಸಿಐಟಿಯುನ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ,ಚೆನ್ನಬಸಯ್ಯಸ್ವಾಮಿ ಅವರು ಶುಕ್ರವಾರ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
‘ಜಿಂದಾಲ್ ನ ಎಚ್ಎಸ್ಎಂ ನೂತನ ಘಟಕದಲ್ಲಿ ನೀರು ಹರಿಸುವ ಪೈಪ್ ಲೈನ್ ಸುರಂಗದ ದುರಸ್ತಿ ಕಾರ್ಯ ಮಾಡುವಾಗ ಹೊಸಪೇಟೆ ತಾಲ್ಲೂಕಿನ ಜಡೆಪ್ಪ (31) ಚೆನೈ ಮೂಲದ ಮಹಾದೇವನ್ (22), ಬೆಂಗಳೂರು ಮೂಲದ ಸುಶಾಂತ್ (23) ಈ ಮೂರು ಜನರು ನೌಕರರು ಜಿಂದಾಲ್ ಆಡಳಿತ ಮಂಡಳಿಯ ನಿರ್ಲಕ್ಷ್ಯತನ ದಿಂದ ಮೃತರಾಗಿದ್ದಾರೆ.
ಜಿಂದಾಲ್ ಕೈಗಾರಿಕೆಯಲ್ಲಿ ಕಾರ್ಮಿಕರ ಅಪಘಾತ ಸಾವುಗಳು ನಿರಂತರವಾಗಿ ನಡೆಯುತ್ತಿದ್ದು, ಕೈಗಾರಿಕಾ ಸುರಕ್ಷತೆ, ಪರಿಸರ ಇಲಾಖೆಯ ಅಧಿಕಾರಿಗಳು ಜಿಂದಾಲ್ ಕಂಪನಿಯ ಕೈಗೊಂಬೆಗಳಾಗಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ಕೈಗಾರಿಕಾ ಅಪಘಾತಗಳನ್ನು ಸಾಮಾನ್ಯ ಅಪಘಾತಗಳಂತೆ ಪರಿಗಣಿಸಿ ಮುಚ್ಚಿ ಹಾಕಲಾಗುತ್ತಿದೆ. ಹಲವು ಅಪಘಾತ ಸಾವುಗಳು ಬೆಳಕಿಗೆ ಬರದಂತೆ ನೋಡಿಕೊಳ್ಳಲಾಗುತ್ತಿದೆ. ಅಪಘಾತಗಳ ಮರಣೋತ್ತರ ಪರೀಕ್ಷೆಗಳು ಸಹ ಕಂಪನಿಗಳ ನಿರ್ದೇಶನದಂತೆ ನಡೆಯುತ್ತಿದ್ದು, ಮೃತ ಕಾರ್ಮಿಕರಿಗೆ ಪರಿಹಾರ ನೀಡುವಲ್ಲಿಯೂ ಅನ್ಯಾಯ ಮಾಡಲಾಗುತ್ತಿದೆ. ಜಿಂದಾಲ್ ನಲ್ಲಿ ಇದುವರೆಗೂ ನಡೆದ ಅಪಘಾತಗಳ ಸಾವುಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕು. ಮೃತ ಕುಟುಂಬಗಳಿಗೆ ಅಗತ್ಯ ಪರಿಹಾರ, ಉದ್ಯೋಗ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.