ADVERTISEMENT

ಆನೇಕಲ್: ಬಕೆಟ್‌ ವಿಚಾರಕ್ಕೆ ಜಗಳ ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 23:50 IST
Last Updated 18 ಸೆಪ್ಟೆಂಬರ್ 2024, 23:50 IST
ಆನೇಕಲ್‌ ತಾಲ್ಲೂಕಿನ ಸಿದ್ದನಪಾಳ್ಯದಲ್ಲಿ ವ್ಯಕ್ತಿಯೊಬ್ಬರ ಕೊಲೆ ಹಿನ್ನೆಲೆಯಲ್ಲಿ ಎಸ್ಪಿ ಬಾಬ ಅವರು ಭೇಟಿ ನೀಡಿ ಪರಿಶೀಲಿಸಿದರು
ಆನೇಕಲ್‌ ತಾಲ್ಲೂಕಿನ ಸಿದ್ದನಪಾಳ್ಯದಲ್ಲಿ ವ್ಯಕ್ತಿಯೊಬ್ಬರ ಕೊಲೆ ಹಿನ್ನೆಲೆಯಲ್ಲಿ ಎಸ್ಪಿ ಬಾಬ ಅವರು ಭೇಟಿ ನೀಡಿ ಪರಿಶೀಲಿಸಿದರು   

ಆನೇಕಲ್: ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದನಪಾಳ್ಯದಲ್ಲಿ ಬಟ್ಟೆ ಒಗೆಯುವ ಬಕೆಟ್‌ ವಿಚಾರಕ್ಕೆ ಆರಂಭವಾದ ಜಗಳ ವ್ಯಕ್ತಿಯೊಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.

ಬಿಹಾರದ ನಿತೀಶ್‌(23) ಮೃತರು. ಕೊಲೆ ಆರೋಪಿ ಅದೇ ರಾಜ್ಯದ ಸೋಮನಾಥ್‌ ಅಂಗರಿಯನ್ನು ಆನೇಕಲ್‌ ಪೊಲೀಸರು ಬಂಧಿಸಿದ್ದಾರೆ.

ನಿತೀಶ್‌ ಮತ್ತು ಸೋಮನಾಥ್‌ ಇಬ್ಬರು ಇಂಡ್ಲವಾಡಿ ಸಮೀಪದ ಮದರ್‌ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ಒಂದೇ ಕಟ್ಟಡದಲ್ಲಿ ಪ್ರತ್ಯೇಕವಾಗಿ ವಾಸವಿದ್ದರು. ಭಾನುವಾರ ಬಟ್ಟೆ ಒಗೆಯಲು ಬಕೆಟ್‌ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಕೈ ಕೈ ಮಿಲಾಯಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸೋಮನಾಥ್‌ ಮಂಗಳವಾರ ರಾತ್ರಿ ನಿತೀಶ್‌ ಮೇಲೆ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಿಮೆಂಟ್‌ ಇಟ್ಟಿಗೆಯನ್ನು ತಲೆಯ ಮೇಲೆ ಹಾಕಿದ್ದರಿಂದ ತೀವ್ರ ರಕ್ತಸ್ರಾವಗೊಂಡ ನಿತೀಶ್‌ ಅವರನ್ನು ಆನೇಕಲ್‌ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮಾರ್ಗಮಧ್ಯೆಯೇ ನಿತೀಶ್‌ ಮೃತಪಟ್ಟರು ಎಂದು ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಪೊಲೀಸ್‌ ಎಸ್ಪಿ ಸಿ.ಕೆ.ಬಾಬ, ಎಎಸ್ಪಿ ನಾಗೇಶ್‌ ಕುಮಾರ್‌, ಡಿವೈಎಸ್ಪಿ ಮೋಹನ್‌ ಕುಮಾರ್‌, ಆನೇಕಲ್‌ ಪೊಲೀಸ್‌ ವೃತ್ತ ನಿರೀಕ್ಷಕ ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.