ಆನೇಕಲ್: ತಾಲ್ಲೂಕಿನ ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡಗಾನಹಳ್ಳಿಯಲ್ಲಿ ಗುರುವಾರ ಬ್ರಿಕ್ ಫೀಲ್ಡ್ ಶೆಲ್ವರ್ಸ್ ನಿವಾಸಿಗಳು ಕನ್ನಡ ಕವಿಗಳ ಹೆಸರಿನ ರಸ್ತೆ ನಾಮಫಲಕ ಅಳವಡಿಸಲು ಅನ್ಯಭಾಷಿಕರು ಅಡ್ಡಿಪಡಿಸಿದ್ದರಿಂದ ಕನ್ನಡ ಪರ ಸಂಘಟನೆಗಳು ಮತ್ತು ಅನ್ಯಭಾಷಿಕ ವಾಸಿಗಳ ನಡುವೆ ಚಕಮಕಿ ನಡೆಯಿತು.
ಸ್ಥಳೀಯ ಕೆಆರ್ಎಸ್ ಪಕ್ಷದ ಮುಖಂಡ ಮಹೇಶ್ ನೇತೃತ್ವದಲ್ಲಿ ಬಡಾವಣೆಯ ರಸ್ತೆಗಳಲ್ಲಿ ಕವಿ, ಸಾಹಿತಿ ಹಾಗೂ ಕನ್ನಡ ಹೋರಾಟಗಾರರ ಹೆಸರಿನ ನಾಮಫಲಕ ಅಳವಡಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಫಲಕ ಅಳವಡಿಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಬ್ರಿಕ್ ಫೀಲ್ಡ್ ಶೆಲ್ಟರ್ಸ್ ಬಡಾವಣೆಯ ಕೆಲವು ನಿವಾಸಿಗಳು ವಿರೋಧ ವ್ಯಕ್ತಪಡಿಸಿದ್ದು, ಅಲ್ಲದೆ ಇವುಗಳನ್ನು ಕಿತ್ತುಹಾಕಲು ಮುಂದಾದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆದಿತ್ತು.
ಪೊಲೀಸರು, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾಗ್ವದ ನಡೆಯಿತು. ಗ್ರಾಮ ಪಂಚಾಯಿತಿ ವತಿಯಿಂದ ನಾಮಫಲಕಗಳನ್ನು ಅಳವಡಿಸಲಾಗುವುದು ಎಂದು ತೀರ್ಮಾನವಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ
ಶಮನವಾಯಿತು.
ಫಲಕ ಅಳವಡಿಕೆಗೆ ಬಡಾವಣೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕನ್ನಡ ನೆಲದಲ್ಲಿ ವಾಸವಿದ್ದು ಕನ್ನಡಿಗರ ಕವಿಗಳ ಹೆಸರಿನ ನಾಮಫಲಕಗಳಿಗೆ ವಿರೋಧ ವ್ಯಕ್ತಪಡಿಸಿದನ್ನು ಸಾಮಾಜಿಕ ಜಾಲತಾಣಿಗರು ಟೀಕಿಸಿದ್ದಾರೆ.
ಸ್ಥಳಕ್ಕೆ ಕನ್ನಡ ಪರ ಸಂಘಟನೆಯ ರೂಪೇಶ್ ರಾಜಣ್ಣ ಭೇಟಿ ನೀಡಿ ಘಟನೆ ನಡೆದ ಸ್ಥಳದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಜೊತಗೆ ಇತರೆ ಅಪಾರ್ಟ್ಮೆಂಟ್ಗಳಲ್ಲಿಯೂ ಕನ್ನಡ ನಾಡು ನುಡಿಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
‘ಗ್ರಾಮ ಪಂಚಾಯಿತಿ ವತಿಯಿಂದ ನಾಮಫಲಕಗಳನ್ನು ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಫಲಕಗಳನ್ನು ಅಳವಡಿಸಲಾಗುವುದು’ ನೆರಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರ್
ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.