ದೊಡ್ಡಬಳ್ಳಾಪುರ: ದಲಿತ ಸಂಘಟನೆಗಳ ಹೋರಾಟಗಳು ನೆಲದ ಸಂವೇದನೆಯನ್ನು ಪ್ರಧಾನವಾಗಿ ಪರಿಗಣಿಸಿ, ಸ್ವಾಭಿಮಾನದ ಸಂಕೇತಗಳಾಗಿ ರೂಪಗೊಳ್ಳಬೇಕು ಎಂದು ದಲಿತ ವಿಮೋಚನಾ ಸೇನೆ ಸಂಸ್ಥಾಪಕ ಅಧ್ಯಕ್ಷ ಮಾ. ಮುನಿರಾಜು ಹೇಳಿದರು.
ತಾಲ್ಲೂಕಿನ ರಾಜಘಟ್ಟ ಗ್ರಾಮದಲ್ಲಿ ದಲಿತ ವಿಮೋಚನಾ ಸೇನೆ ವತಿಯಿಂದ ನಡೆದ ‘ವಿಚಾರ ಮಂಥನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡಜನರ ಜೀವಸೆಲೆಯ ದನಿಯಾಗಿ ದೊಡ್ಡಬಳ್ಳಾಪುರ ಕೇಂದ್ರಿತವಾಗಿ ರೂಪಗೊಂಡ ಅನೇಕ ಹೋರಾಟಗಳು ರಾಜ್ಯಮಟ್ಟದಲ್ಲೂ ಸದ್ದು ಮಾಡಿದ್ದು ಇತಿಹಾಸ. 70-80ರ ದಶಕದಲ್ಲಿ ಉಂಟಾದ ಸಾಮಾಜಿಕ ಚಳವಳಿಯ ಹೊಸ ಅಧ್ಯಾಯಕ್ಕೆ ದೊಡ್ಡಬಳ್ಳಾಪುರದ ಕೊಡುಗೆಯೂ ಇದೆ. ಆದರೆ ನಂತರದ ಕಾಲಘಟ್ಟದಲ್ಲಿ ಅದೇ ಉತ್ಸಾಹ ಕಾಣಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಕನ್ನಡ,ದಲಿತ,ರೈತ ಚಳವಳಿಗಳು ಸಮನ್ವಯದ ಹೋರಾಟಗಳನ್ನು ರೂಪಿಸಲು ವೇದಿಕೆ ನಿರ್ಮಾಣವಾಗಬೇಕು ಎಂದರು.
ನಗರಸಭೆ ಸದಸ್ಯ ಹಾಗೂ ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್ ಮಾತನಾಡಿ, ಕಷ್ಟದ ದಿನಗಳಲ್ಲೂ ಸಾಮಾಜಿಕ ಕಾಳಜಿಯ ಕಾರಣದಿಂದಾಗಿ ಚಳವಳಿಗಳಲ್ಲಿ ತೊಡಗಿಸಿಕೊಂಡ ಒಂದು ಪೀಳಿಗೆ ಸ್ವಾರ್ಥರಹಿತ, ರಾಜಿರಹಿತ ಹೋರಾಟಗಳ ಮಾದರಿಯನ್ನು ದೊಡ್ಡಬಳ್ಳಾಪುರದಲ್ಲಿ ಸೃಷ್ಟಿಸಿದ್ದರು. ಅಂತಹ ಗಟ್ಟಿತನದ ಚಳವಳಿಗಳ ಕೊರತೆ ಈಗ ಎದ್ದು ಕಾಣುತ್ತಿದೆ. ಆಳುವ ವರ್ಗ ಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಿಲ್ಲ ಎಂದರು.
ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ್, ಪ್ರಾಧ್ಯಾಪಕ ಕೆ.ಆರ್.ರವಿಕಿರಣ್, ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಗುರುರಾಜಪ್ಪ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಸದಸ್ಯ ಅಂಜನಮೂರ್ತಿ, ಕರ್ನಾಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಗೌರವ ಅಧ್ಯಕ್ಷ ಪು.ಮಹೇಶ್, ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್.ವೇಣು, ಕಾರ್ಮಿಕ ಘಟಕದ ಅಧ್ಯಕ್ಷ ರಾಜಘಟ್ಟ ಮಹೇಶ್, ಮುನಿಸುಬ್ಬಯ್ಯ, ಮುನಿಯಪ್ಪ, ಗೋಪಾಲ್, ಅನ್ನಪೂರ್ಣ, ಓಬಳೇಶ್, ಮಧು, ಕನ್ನಡ ಪಕ್ಷದ ವೆಂಕಟೇಶ್, ಮುನಿಪಾಪಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.