ದೊಡ್ಡಬಳ್ಳಾಪುರ: ತಾಲ್ಲೂಕಿನ ಗೌರಿಬಿದನೂರು ಗಡಿಭಾಗ ಹೊರತುಪಡಿಸಿದರೆ ಉಳಿದಂತೆ ದೇವನಹಳ್ಳಿ, ಯಲಹಂಕ, ನೆಲಮಂಗಲ, ಕೊರಟಗೆರೆ ಈ ಭಾಗಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಇನ್ನು ಐದಾರು ವರ್ಷಗಳಲ್ಲಿ ತಾಲ್ಲೂಕಿನಲ್ಲಿ ಯಾವುದೇ ಕೃಷಿ ಭೂಮಿ ಉಳಿಯುವ ಲಕ್ಷಣ ಕಾಣುತ್ತಿಲ್ಲ. ಹೈಟೆಕ್ ಲಾಜಿಸ್ಟಿಕ್ ಪಾರ್ಕ್, ಪುಣೆ ಹೈಟೆಕ್ ಕಾರಿಡಾರ್ ರಸ್ತೆ, ಎತ್ತಿನಹೊಳೆ ಜಲಾಶಯ ನಿರ್ಮಾಣ, ಬೃಹತ್ ಕೈಗಾರಿಕೆಗಳ ಸ್ಥಾಪನೆ ಹೀಗೆ ಹತ್ತಾರು ಯೋಜನೆಗಳಿಗೆ ದೊಡ್ಡಬಳ್ಳಾಪುರ ತಾಲ್ಲೂಕು ಒಂದರಲ್ಲೇ ಸುಮಾರು 3,000 ಎಕರೆ ಭೂಸ್ವಾಧೀನ ಪ್ರಕ್ರಿಯೆ ಇತ್ತೀಚೆಗೆ ಮುಕ್ತಾಯವಾಗಿದೆ.
ಒಂದು ದಶಕದ ಹಿಂದೆ ನಡೆದಿರುವ ಭೂಸ್ವಾಧೀನ ಹೊರತುಪಡಿಸಿ ಎತ್ತಿನಹೊಳೆ ಪೈಪ್ಲೈನ್, ಬೃಹತ್ ಪವರ್ ಗ್ರೀಡ್ ತಂತಿಗಳನ್ನು ಅಳವಡಿಸಲು ಕಂಬಗಳ ನಿರ್ಮಾಣಕ್ಕೆ ಭೂಸ್ವಾಧೀನ ನಡೆಯುತ್ತಲೇ ಇದೆ.
ಭೂಸ್ವಾಧಿನ ಪ್ರಕ್ರಿಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ಪಡೆಯುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಹಾಗೆಯೇ ದೇಶದ ಹಾಗೂ ತಾಲ್ಲೂಕಿನ ಪ್ರಗತಿ ದೃಷ್ಟಿಯಿಂದ ಕೈಗಾರಿಕೆಗಳ ಸ್ಥಾಪನೆ ಇಂದಿನ ತುರ್ತು ಅಗತ್ಯಗಳಲ್ಲಿ ಒಂದು. ಆದರೆ, ಭೂಸ್ವಾಧೀನಕ್ಕೆ ಕನಿಷ್ಠ ಮಿತಿ ಇಲ್ಲದಂತೆ ಇಡೀ ತಾಲ್ಲೂಕಿನ ರೈತರನ್ನು ಒಕ್ಕಲೆಬ್ಬಿಸುವಂತೆ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಬೇಕು.
ಎಲ್ಲ ರೈತರಿಗೂ ಕೈಗಾರಿಕೆಗಳಲ್ಲಿ ಕೆಲಸ ಸಿಗಲು ಸಾಧ್ಯವಿಲ್ಲ. ಕೆಲಸ ಸಿಕ್ಕರೂ ಗೇಟ್ ಕಾಯುವ ಕೆಲಸ ನೀಡಬಹುದು. ಆದರೆ, ಕೃಷಿ ಉಳಿದರೆ ರೈತನ ಕುಟುಂಬ ಸೇರಿದಂತೆ ಹತ್ತಾರು ಕುಟುಂಬಗಳು ದುಡಿಯುವ ಕೈಗಳಿಗೆ ಕೆಲಸ ಸಿಗುತ್ತದೆ. ರೈತರ ಜಮೀನು ಕಿತ್ತುಕೊಂಡು ಗ್ರಾಮಗಳಿಂದ ಜನರನ್ನು ಒಕ್ಕಲೆಬ್ಬಿಸಿ ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹಕ್ಕಾಗಿ ಜಲಾಶಯ ನಿರ್ಮಿಸಿ ಕೈಗಾರಿಕೆಗಳಿಗೆ ಉಪಯೋಗ ಮಾಡುವ ರೈತ ವಿರೋಧಿಯನ್ನು ‘ಅಭಿವೃದ್ಧಿ’ ಎಂದು ಕರೆಯುವುದು ಮೂರ್ಖತನವಾದೀತು.
ಕಂಚಿಗನಾಳ ಲಕ್ಷ್ಮೀನಾರಾಯಣ, ಕೃಷಿಕ,ದೊಡ್ಡಬಳ್ಳಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.