ದೊಡ್ಡಬಳ್ಳಾಪುರ: ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕಾರ್ಡ್ದಾರರಿಗೆ 5 ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಖಾತೆಗಳಿಗೆ ಹಣ ಕೊಡುವ ಕಾರ್ಯಕ್ರಮ ಆರಂಭವಾದ ದಿನದಿಂದಲೂ ತಾಲ್ಲೂಕಿನ 5,983 ಕಾರ್ಡ್ದಾರರಿಗೆ ಇದುವರೆಗೆ ಹಣ ಜಮೆ ಆಗಿಲ್ಲ.
ಹಣ ವರ್ಗಾವಣೆಯಾಗದೇ ಇರುವ ಕಾರ್ಡ್ದಾರರ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುಸುವ ಕೆಲಸ ಶನಿವಾರ ನಗರದ ಟಿಎಪಿಎಂಸಿಎಸ್ ಆವರಣದಲ್ಲಿ ನಡೆಯಿತು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ‘ಅನ್ನಭಾಗ್ಯ’ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವ ಫಲಾನುಭವಿಗಳಿಗೆ 10 ಕೆ.ಜಿ ಉಚಿತ ಅಕ್ಕಿ ವಿತರಣೆ ಜಾರಿಗೆ ತರಲಾಗಿದೆ. ಆದರೆ ಅಕ್ಕಿ ದೊರೆಯದೇ ಇರುವ ಹಿನ್ನೆಲೆಯಲ್ಲಿ 5 ಕೆ.ಜಿ. ಅಕ್ಕಿ ಬದಲಿಗೆ ಅಷ್ಟೇ ಮೊತ್ತದ ಹಣವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಕಾರ್ಡ್ದಾರರ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತಿದೆ.
ಆದರೆ ಆದಾರ್ ಕಾರ್ಡ್ಗಳ ಇಕೆವೈಸಿ, ಬ್ಯಾಂಕ್ ಖಾತೆಗೆ ಆದಾರ್ ಸಂಖ್ಯೆ ಜೋಡಣೆಯಾಗದೇ ಇರುವುದು ಸೇರಿದಂತೆ ಹಲವಾರು ತಾಂತ್ರಿಕ ಕಾರಣಗಳಿಂದಾಗಿ ತಾಲ್ಲೂಕಿನಲ್ಲಿ ಇನ್ನೂ 5,983 ಜನ ಕಾರ್ಡ್ದಾರರಿಗೆ ಹಣ ವರ್ಗಾವಣೆಯಾಗಿಲ್ಲ. ಈ ಫಲಾನುಭವಿಗಳು ತಮ್ಮ ಖಾತೆಗಳಿಗೆ ಹಣ ಬಾರದೆ ಇರುವ ಬಗ್ಗೆ ವಿನಾಕಾರಣ ವಿವಿಧ ಇಲಾಖೆಗಳಿಗೆ ಅಲೆದಾಡುವಂತಾಗಿತ್ತು. ಕಾರ್ಡ್ದಾರರ ಈ ಅಲೆದಾಟವನ್ನು ತಪ್ಪಿಸುವ ಸಲುವಾಗಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ವತಿಯಿಂದ ಶನಿವಾರ ತಾಲ್ಲೂಕಿನಲ್ಲಿ ತಾಂತ್ರಿಕ ಸಮಸ್ಯೆ ಪರಿಹಾರ ಆಂದೋಲನ ನಡೆಸಲಾಯಿತು.
ತಾಂತ್ರಿಕ ಸಮಸ್ಯೆ ಪರಿಹಾರ ಆಂದೋಲನ: ಈ ಬಗ್ಗೆ ಮಾಹಿತಿ ನೀಡಿದ ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೆದಾರ್ ಶಶಿಕಲಾ ‘ತಾಲ್ಲೂಕಿನಲ್ಲಿ 66,372 ಬಿಪಿಎಲ್ ಕಾರ್ಡ್, 2,909 ಅಂತ್ಯೋದಯ, 4,100 ಎಪಿಎಲ್ ಕಾರ್ಡ್ಗಳಿವೆ. ಇವುಗಳ ಪೈಕಿ 5,983 ಕಾರ್ಡ್ಗಳಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗಿರಲಿಲ್ಲ. ಸಾಕಷ್ಟು ಜನ ಇನ್ನೂ ಬ್ಯಾಂಕ್ ಖಾತೆಗಳನ್ನು ಹೊಂದಿರಲಿಲ್ಲ. ಇಂತಹವರಿಗೆ ಅಂಚೆ ಇಲಾಖೆ ವತಿಯಿಂದ ಉಳಿತಾಯ ಬ್ಯಾಂಕ್ ಖಾತೆಯನ್ನು ಸಹ ಸ್ಥಳದಲ್ಲೇ ತೆರಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಕಾರ್ಡ್ದಾರರ ತಾಂತ್ರಿಕ ಸಮಸ್ಯೆಗಳನ್ನು ಆನ್ಲೈನ್ ಮೂಲಕ ಪರಿಶೀಲಿಸಿ ಸರಿಪಡಿಸಲು 8 ಕೌಂಟರ್ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಸದ್ಯಕ್ಕೆ ಒಂದು ದಿನದ ಮಟ್ಟಿಗೆ ಮಾತ್ರ ಈ ಅಂದೋಲನೆ ನಡೆಸಲಾಗಿದೆ. ಗ್ರಾಮ ಒನ್ ಕೇಂದ್ರಗಳು, ಸೈಬರ್ ಕೇಂದ್ರಗಳಲ್ಲೂ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಅವಕಾಶ ಇದೆ. ಸರ್ಕಾರದ ಆದೇಶ ಬಂದರೆ ಮತ್ತೊಮ್ಮೆ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವ ಅಂದೋಲನ ನಡೆಸಲಾಗುವುದು ಎಂದರು.
ಅಂಕಿ ಅಂಶ
5,983-ಹಣ ಬಾರದೇ ಇರುವ ಬಿಪಿಎಲ್ ಕಾರ್ಡ್
66,372-ಒಟ್ಟು ಬಿಪಿಎಲ್ ಕಾರ್ಡ್
2,909-ಅಂತ್ಯೋದಯ ಕಾರ್ಡ್
4,100-ಎಪಿಎಲ್ ಕಾರ್ಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.