ADVERTISEMENT

ಡಿ.ಸಿ ಹೆಸರಲ್ಲಿ ಪೊಲೀಸರ ಬಳಿ ಹಣಕ್ಕೆ ಬೇಡಿಕೆ!

ವಾಟ್ಸ್‌ ಆ್ಯಪ್‌ ಡಿ.ಪಿ.ಯಲ್ಲಿ ಜಿಲ್ಲಾಧಿಕಾರಿ ಫೋಟೊ

​ಪ್ರಜಾವಾಣಿ ವಾರ್ತೆ
Published 15 ಮೇ 2024, 19:23 IST
Last Updated 15 ಮೇ 2024, 19:23 IST
ಎನ್‌. ಶಿವಶಂಕರ‌
ಎನ್‌. ಶಿವಶಂಕರ‌   

ದೇವನಹಳ್ಳಿ: ವಾಟ್ಸ್‌ಆ್ಯಪ್‌ ಡಿ.ಪಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎನ್‌. ಶಿವಶಂಕರ ಭಾವಚಿತ್ರ ಬಳಸಿ ಪೊಲೀಸ ಅಧಿಕಾರಿಗಳ ಬಳಿಯೇ ಹಣಕ್ಕೆ ಬೇಡಿಕೆ ಇಡಲಾಗಿದೆ.  

ಮೇ 9ರ ಮಧ್ಯಾಹ್ನ ವಾಟ್ಸ್‌ ಆ್ಯಪ್‌ ಡಿ.ಪಿ.ಯಲ್ಲಿ ಜಿಲ್ಲಾಧಿಕಾರಿ ಭಾವಚಿತ್ರ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬವಿಜಯಪುರ ಪೊಲೀಸ್‌ ಇನ್‌ಸ್ಪೆ ಪೆಕ್ಟರ್‌ ಪ್ರಶಾಂತ್‌ ನಾಯಕ್‌, ಚನ್ನರಾಯಪಟ್ಟಣ ಠಾಣೆಯ ಪಿಎಸ್‌ಐ ಅಪ್ಪಣ್ಣ, ವಿಶ್ವನಾಥಪುರದಲ್ಲಿ ಈ ಹಿಂದೆ ಕೆಲಸ ನಿರ್ವಹಿಸಿದ್ದ ಪಿಎಸ್‌ಐ ನಂದೀಶ್‌ ಅವರಿಗೆ ಹಣ ನೀಡುವಂತೆ ಸಂದೇಶ ರವಾನಿಸಿದ್ದಾನೆ. 

‘ನಾನು ಮೀಟಿಂಗ್‌ನಲ್ಲಿ ಇರುವುದರಿಂದ ಯಾವುದೋ ಪ್ರಾಜೆಕ್ಟ್‌ಗೆ ಹಣ ಬೇಕಿದೆ. ₹50 ಸಾವಿರ ಹಣವನ್ನು ಕನಕರಾಜು ಎಂಬಾತನಿಗೆ ಕಳುಹಿಸಿ’ ಎಂದು ಪೊಲೀಸರಿಗೆ ಸಂದೇಶ ಕಳುಹಿಸಿದ್ದ ಅಪರಿಚಿತ ವ್ಯಕ್ತಿ ತಿಳಿಸಿದ್ದಾನೆ. 

ADVERTISEMENT

ಇದೇ ರೀತಿಯ ಸಂದೇಶವನ್ನು ಹಲವು ಸರ್ಕಾರಿ ಅಧಿಕಾರಿಗಳಿಗೂ ಕಳುಹಿಸಿರುವ ಆರೋಪಿ ಅವರಿಂದಲೂ ತಲಾ ₹50 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಕನಕರಾಜು ಎಂಬಾತನಿಗೆ ಹಣ ವರ್ಗಾಹಿಸುವಂತೆ ತಿಳಿಸಿದ್ದ. ಇದರಿಂದ ಅಧಿಕಾರಿಗಳಿಗೆ ಸಂಶಯ
ಬಂದಿತ್ತು.

ಇದು ಜಿಲ್ಲಾಧಿಕಾರಿ ಆಪ್ತ ಸಹಾಯಕ ಎಚ್‌.ಡಿ. ಅಭಿಷೇಕ್‌ ಗಮನಕ್ಕೆ ಬಂದಿದ್ದು ದೂರು ನೀಡಿದ್ದಾರೆ. ಜಿಲ್ಲಾಧಿಕಾರಿ ಭಾವಚಿತ್ರವನ್ನು ವಾಟ್ಸ್‌ ಆ್ಯಪ್‌ ಡಿ.ಪಿ.ಯಲ್ಲಿ ಹಾಕಿಕೊಂಡು ಪೊಲೀಸರು ಸೇರಿದಂತೆ ಇತರ ಸರ್ಕಾರಿ ಅಧಿಕಾರಿಗಳಿಗೆ ಮೋಸ ಮಾಡಲು ಸಂಚು ರೂಪಿಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ತಾಲ್ಲೂಕಿನ ವಿಶ್ವನಾಥಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.