ದೇವನಹಳ್ಳಿ: ಪುರಸಭೆ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಮೇಲೆ ಕಾರ್ಯನಿರ್ವಹಿಸುತ್ತಿದ್ದ 12 ಪೌರಕಾರ್ಮಿಕರು ಕಾಯಂಗೊಂಡಿದ್ದು, ಅವರಿಗೆ ನೇಮಕಾತಿ ಆದೇಶ ಪತ್ರವನ್ನು ಈಚೆಗೆ ವಿತರಿಸಲಾಯಿತು.
ಪುರಸಭೆ ಕಚೇರಿಯಲ್ಲಿ ಆದೇಶ ಪ್ರತಿ ವಿತರಿಸಿದ ಬಳಿಕ ಮಾತನಾಡಿದ ಪುರಸಭಾ ಮುಖ್ಯಾಧಿಕಾರಿ ದೊಡ್ಡ ಮಲವಯ್ಯ, ಸುಮಾರು 10 ವರ್ಷದಿಂದ ಹೊರಗುತ್ತಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರ ಸೇವೆ ಕಾಯಂ ಆಗಿದೆ. ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳಿಗೆ ನೀವು ನೀಡುವ ಶಿಕ್ಷಣವೇ ನಿಮ್ಮ ಆಸ್ತಿ ಆಗುತ್ತಾರೆ. ಶಿಕ್ಷಣವನ್ನೇ ನೀಡಿ ಮಕ್ಕಳಿಗೆ ಆಸ್ತಿ ವಂತವನ್ನಾಗಿ ಮಾಡಿ ಎಂದು ಸಲಹೆ ನೀಡಿದರು.
ಪೌರಕಾರ್ಮಿಕರು ನಗರದ ಜೀವನಾಡಿಗಳು. ಚಳಿ, ಗಾಳಿ ಮತ್ತು ಮಳೆ ಎನ್ನದೆ ತಮ್ಮ ಕಾಯಕದಲ್ಲಿ ನಿರತರಾಗಿರುತ್ತಾರೆ. ಪುರಸಭೆಯಿಂದ ದೊರೆಯುವ ಪರಿಕರ ಗಳನ್ನು ಬಳಸಬೇಕು. ಪ್ರತಿಯೊಬ್ಬರೂ ಕರ್ತವ್ಯದ ವೇಳೆ ಸುರಕ್ಷಿತ ಪರಿಕರಗಳನ್ನು ಉಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಜಪ್ಪ , ಹಲವು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ 12 ಪೌರಕಾರ್ಮಿಕರು ಕಾಯಂಗೊಂಡಿದ್ದಾರೆ. ಎಲ್ಲ ನೌಕರರಿಗೂ ಅಭಿನಂದನೆಗಳು. ವೇತನದ ಹಣವನ್ನು ಅನಗತ್ಯ ಖರ್ಚು ಮಾಡಬೇಡಿ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.
ಪುರಸಭೆ ಕಂದಾಯ ಅಧಿಕಾರಿ ಶಿವಮೂರ್ತಿ, ಪರಿಸರ ಎಂಜಿಯರ್ ಲೋಹಿತ್, ಹಿರಿಯ ಆರೋಗ್ಯ ನಿರೀಕ್ಷಕಿ ಶ್ರೀದೇವಿ, ಪೌರಕಾರ್ಮಿಕರ ಸಂಘದ ಖಜಾಂಚಿ ಮಂಜುನಾಥ್, ಸಮುದಾಯ ಸಂಘಟನಾಧಿಕಾರಿ ಭೈರಪ್ಪ, ಪುರಸಭೆ ವ್ಯವಸ್ಥಾಪಕಿ ಸರಸ್ವತಿ, ಚಂದ್ರಶೇಖರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.