ದೇವನಹಳ್ಳಿ: ತಾಲ್ಲೂಕಿನ ಕನ್ನಮಂಗಲ ಪಾಳ್ಯ ಹಾಗೂ ದೊಡ್ಡಪ್ಪನಹಳ್ಳಿಯಲ್ಲಿರುವ ಕಸದ ತೊಟ್ಟಿಯನ್ನು ಕಳೆದ ಮೂರು ತಿಂಗಳಿಂದ ಸ್ವಚ್ಛಗೊಳ್ಳಿಸಿಲ್ಲ ಎಂದು ಅಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಕಸವನ್ನು ತೆಗೆದುಕೊಂಡು ಹೋಗದೇ ಕನ್ನಮಂಗಲ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛತೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಹಣ ಲೂಟಿ ಮಾಡಲಾಗುತ್ತಿದೆ. ಇಡೀ ಗ್ರಾ.ಪಂ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಜನ ವಾಸಿಸುವ ಪ್ರದೇಶದಲ್ಲಿ ನೈರ್ಮಲ್ಯತೆ ಕಾಪಾಡುತ್ತಿಲ್ಲ ಎಂದು ದೂರಿದ್ದಾರೆ.
ದೊಡ್ಡಪ್ಪನಹಳ್ಳಿ ಬಳಿ ಇರುವ ಉರ್ದು ಶಾಲೆಯ ಸಮೀಪ ತೊಟ್ಟಿಯಲ್ಲಿ ಕಸ ತುಂಬಿದ್ದು, ಹತ್ತಿರದಲ್ಲಿಯೇ ಅಂಗನವಾಡಿ ಇದೆ. ಅದಕ್ಕೆ ಹೊಂದಿಕೊಂಡಂತೆ ಶುದ್ಧ ಕುಡಿಯುವ ನೀರಿನ ಘಟಕವಿದ್ದು, ನೀರು ತರಲು ಹೋದವರು ಮೂಗು ಮಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಶಾಲೆಗೆ ದಾಖಲು ಆಗಲು ಬರುವ ವಿದ್ಯಾರ್ಥಿಗಳು, ಸಣ್ಣ ಮಕ್ಕಳಿಗೆ ತೊಂದರೆಯಾಗುತ್ತಿದ್ದು, ಇಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ಆರೋಗ್ಯ ಸಮಸ್ಯೆ ಬಿಗಡಾಯಿಸಿದ್ದು, ಕೂಡಲೇ ಕಸ ತೆರವು ಮಾಡಿ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕೆಂದು ಆಗ್ರಹಿಸಿದ್ದಾರೆ.
ಇಲ್ಲಿಯೇ ವೃದ್ಧಾಶ್ರಮ ಇದ್ದು, ಆಸರೆ ಇಲ್ಲದ ಹಿರಿ ಜೀವಿಗಳು ಬದುಕುತ್ತಿರುವ ಸ್ಥಳದಲ್ಲಿ ಗಬ್ಬು ವಾಸನೆ ನಾರುತ್ತಿದ್ದು, ಸೊಳ್ಳೆ, ಕ್ರಿಮಿ ಕೀಟಗಳಿಂದ ಅವರು ದಿನ ನಿತ್ಯ ಹೇಳಿಕೊಳ್ಳುಲು ಆಗದಂತಹ ಬಾಧೆಯನ್ನು ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಸ್ಥಳೀಯರು.
Quote - ಕನ್ನಮಂಗಲ ಪಾಳ್ಯ ದೊಡ್ಡಪ್ಪನಹಳ್ಳಿಯಲ್ಲಿ ತಿಂಗಳಿಗೊಮ್ಮೆ ಕಸ ವಿಲೇವಾರಿ ಮಾಡಲು ಕ್ರಿಯಾ ಯೋಜನೆ ರೂಪಿಸಿದ್ದರೂ ಅವರು ಮೂರು ತಿಂಗಳಾದರೂ ಬರುವುದಿಲ್ಲ. ಬಿಲ್ಗಳು ಮಾತ್ರ ಪಾವತಿಯಾಗುತ್ತಿದೆ. ಸೋಮಶೇಖರ್ ಕನ್ನಮಂಗಲ ಗ್ರಾ.ಪಂ ಸದಸ್ಯ
Quote - ಕಸ ವಿಲೇವಾರಿಯಲ್ಲಿ ಒಂದೆರೆಡು ದಿನ ತಡವಾಗಿದೆ. ಆದರೆ ಬುಧವಾರ ಸ್ಥಳದಲ್ಲಿದ್ದ ಕಸವನ್ನು ತೆರವು ಮಾಡಿದ್ದೇವೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ ಶ್ರೀನಿವಾಸ್ ಪಿಡಿಓ ಕನ್ನಮಂಗಲ ಗ್ರಾ.ಪಂ
Cut-off box - ಕಾಟಾಚಾರಕ್ಕೆ ಕಸ ವಿಲೇವಾರಿ ನಿವಾಸಿಗಳ ಒತ್ತಾಯದ ಮೇರೆಗೆ ರಸ್ತೆಯಲ್ಲಿ ಹರಡಿಕೊಂಡಿದ್ದ ಕಸವನ್ನು ತೆರವು ಮಾಡಿದ್ದಾರೆ ಅಷ್ಟೇ ಸಂಜೆ 6.20ಕ್ಕೆ ಬಂದು ಅಲ್ಪ ಪ್ರಮಾಣದ ಕಸ ತೆಗೆದುಕೊಂಡು ಹೋಗಿದ್ದಾರೆ. ತೊಟ್ಟಿಯಲ್ಲಿರುವ ಕಸವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಿಲ್ಲ. ಜನ ಸೇವೆ ಮಾಡಿದರೇ ಪೂರ್ಣ ಪ್ರಮಾಣದಲ್ಲಿ ಮಾಡಬೇಕು. ಅದನ್ನು ಬಿಟ್ಟು ಲೋಡ್ ಗಟ್ಟಲೇ ಇರುವ ಕಸದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರವೇ ತೆಗೆದುಕೊಂಡು ಹೋಗಿದ್ದಾರೆ. ಇನ್ನುಳಿದ ಕಸವನ್ನೂ ವಿಲೇವಾರಿ ಮಾಡಬೇಕು ಎಂದು ಗ್ರಾ.ಪಂ ಸದಸ್ಯ ಸೋಮಶೇಖರ್ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.