ADVERTISEMENT

ದೇವನಹಳ್ಳಿ | ಬೇಸಿಗೆ ಮುನ್ನವೇ ಉರಿ ಬಿಸಿಲು: ಹೆಚ್ಚುತ್ತಿರುವ ಅಗ್ನಿ ದುರಂತಗಳು

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 5:30 IST
Last Updated 29 ಫೆಬ್ರುವರಿ 2024, 5:30 IST
ದೇವನಹಳ್ಳಿಯ ಶಾಲೆ ಒಂದರಲ್ಲಿ ಅಗ್ನಿ ದುರಂತದಲ್ಲಿ ಬೆಂಕಿ ನಂದಿಸುವ ಕುರಿತು ಮಕ್ಕಳಿಗೆ ತರಬೇತಿ ನೀಡುತ್ತಿರುವ ದೃಶ್ಯ
ದೇವನಹಳ್ಳಿಯ ಶಾಲೆ ಒಂದರಲ್ಲಿ ಅಗ್ನಿ ದುರಂತದಲ್ಲಿ ಬೆಂಕಿ ನಂದಿಸುವ ಕುರಿತು ಮಕ್ಕಳಿಗೆ ತರಬೇತಿ ನೀಡುತ್ತಿರುವ ದೃಶ್ಯ   

ದೇವನಹಳ್ಳಿ: ಬೇಸಿಗೆ ಆರಂಭಕ್ಕೂ ಮುನ್ನವೇ ಉರಿ ಬಿಸಿಲು ಹೆಚ್ಚಾಗಿದ್ದು, ಕಳೆದೆರಡು ತಿಂಗಳಲ್ಲಿ 56 ಅಗ್ನಿ ಅವಘಡಗಳು ಸಂಭವಿಸಿವೆ.

ಲಭ್ಯವಿರುವ ಸಂಪನ್ಮೂಲದಲ್ಲಿ ಅಗ್ನಿ ನಂದಿಸುವ ಕೆಲಸ ಮಾಡಲಾಗುತ್ತಿದೆ. ಅಗ್ನಿ ಶಾಮಕ ವಾಹನ ತೆರಳಲು ಸಾಧ್ಯವಾಗದ ಸ್ಥಳಗಳಲ್ಲಿ ನೈಸರ್ಗಿಕವಾಗಿ ದೊರೆಯುವ ಹಸಿರು ಎಲೆ, ಕೊಂಬೆ ಬಳಸಿಕೊಂಡು ಬೆಂಕಿ ಶಾಮನ ಮಾಡಲಾಗುತ್ತಿದೆ.

ತಾಲ್ಲೂಕಿನಾದ್ಯಂತ ಕಳೆದ ಒಂದು ತಿಂಗಳಿಂದ ಹೆಚ್ಚು ಅಗ್ನಿ ದುರಂತ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಅಗ್ನಿ ಅವಘಡ ತಪ್ಪಿಸಲು ರೈತರು, ಸಾರ್ವಜನಿಕರು ಮುನ್ನೆಚ್ಚರಿಕೆವಹಿಸುವಂತೆ ಎಂದು ಅಗ್ನಿ ಶಾಮಕ ಠಾಣೆ ಮನವಿ ಮಾಡಿದೆ.

ADVERTISEMENT

ಈಗಾಗಲೇ ಅರಣ್ಯ ಇಲಾಖೆ, ವಿವಿಧ ಶಾಲಾ ಕಾಲೇಜು ಸೇರಿದಂತೆ ಕೈಗಾರಿಕೆಗಳಲ್ಲಿ ಬೆಂಕಿ ನಂದಿಸುವ ಕುರಿತು ಅಗ್ನಿ ಶಾಮಕ ಠಾಣೆಯಿಂದ ಪ್ರಾತ್ಯಕ್ಷಿಕೆ ಮತ್ತು ತರಬೇತಿ ನೀಡಲಾಗುತ್ತಿದೆ.

ಹೆಚ್ಚಾಗಿ ನೀಲಗಿರಿ ಮರಗಳು ಇರುವ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸುತ್ತಿರುದರಿಂದ, ಅದರ ನಿಯಂತ್ರಣಕ್ಕೆ ಒಣಗಿರುವ ಎಲೆ, ಕೊಂಬೆ ತೆರವು ಮಾಡಬೇಕು. ಒಂದಕ್ಕೊಂದು ಉಜ್ಜಿಕೊಳ್ಳುವ ಕೊಂಬೆಗಳನ್ನು ತೆಗೆದು ಹಾಕಬೇಕು. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್‌ ತಂತಿಗಳ ಕೆಳಗೆ ಹಾಗೂ ವಿದ್ಯುತ್‌ ಪರಿವರ್ತಕ ಬಳಿ ಒಣಗಿದ ಹುಲ್ಲಿನ ಬಣವೆ ಹಾಕುದಂತೆ ರೈತರು ಎಚ್ಚರ ವಹಿಸಬೇಕು ಎಂದು ಅಗ್ನಿ ಶಾಮಕ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಮೋಜು–ಮಸ್ತಿ ಮಾಡಲು ಬರುವ ವ್ಯಕ್ತಿಗಳು ಪ್ಲಾಸ್ಟಿಕ್‌, ಬಾಟಲಿಗಳನ್ನು ಇಲ್ಲಿ ಬೀಸಾಡುವುದನ್ನು ನಿಲ್ಲಿಸಬೇಕು. ಬಾಟಲಿನ ಗಾಜುಗಳ ಮೂಲಕ ಸೂರ್ಯನ ಕಿರಣಗಳು ಕೇಂದ್ರೀಕೃತವಾಗಿ ಬೆಂಕಿ ಹಚ್ಚಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಿಳಿಸಿದ್ದಾರೆ.

ದೇವನಹಳ್ಳಿ ತಾಲ್ಲೂಕಿನಲ್ಲಿ ಇತ್ತೀಚಿಗೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೆಂಕಿ ನಂದಿಸುವತ್ತಿರುವ ಅಗ್ನಿ ಶಾಮಕ ದಳದ ಸಿಬ್ಬಂದಿ
ಬೆಂಕಿ ಅಂಟಿಕೊಳ್ಳಲು ಪ್ರಾಕೃತಿಕ ಕ್ರಿಯೆಗಳೇ ಕಾರಣ. ಅದು ವಿಶಾಲವಾಗಿ ವ್ಯಾಪಿಸದಂತೆ ತಡೆಯಲು ಬೆಂಕಿಗಾವುತಿ ಆಗುವ ವಸ್ತುಗಳು ಬೆಂಕಿಯ ಕಿನ್ನಾಲೆಗೆ ಸಿಗದಂತೆ ಮಾಡಿದರೇ ಅವಘಡಗಳು ಕ್ಷೀಣಿಸುತ್ತದೆ
ಎಚ್‌.ಸಿ. ಸಂತೋಷ್ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.