ಹೊಸಕೋಟೆ: ನಗರದ ದಂಡುಪಾಳ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದ್ದು, ಗ್ರಾಮದ ಮುಖ್ಯ ರಸ್ತೆಗೆ ಡಾಂಬರು ಹಾಕಿಸಿ ಅತೀ ಶೀಘ್ರದಲ್ಲಿ ಎಂವಿಜೆ ಆಸ್ಪತ್ರೆಯಿಂದ ಉಚಿತ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ದಂಡುಪಾಳ್ಯ ವಾರ್ಡಿನಲ್ಲಿ ಅರುಣಜ್ಯೋತಿ ಯುವಕರ ಬಳಗ ಹಮ್ಮಿಕೊಂಡಿದ್ದ 33ನೇ ವರ್ಷದ ಗಣೇಶೋತ್ಸವದಲ್ಲಿ ಮಾತನಾಡಿದರು.
ದಂಡುಪಾಳ್ಯ ಗೇಟ್ನಿಂದ ಸೋಲೂರು ವರೆಗೆ ಡಾಂಬರು ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಅತೀ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಹತ್ತನೇ ತರಗತಿ ಹಾಗೂ ಪಿಯುಸಿ ತರಗತಿಗಳಲ್ಲಿ ಹೆಚ್ಚು ಅಂಕ ಗಳಿಸಿದ ಗ್ರಾಮದ ವಿದ್ಯಾರ್ಥಿಗಳಿಗೆ ಶಾಸಕ ಶರತ್ ಬಚ್ಚೇಗೌಡ ವೈಯಕ್ತಿಕವಾಗಿ ನಗದು ಬಹುಮಾನ ನೀಡಿ ಅಭಿನಂದಿಸಿದರು.
ನಗರ ಯೋಜನಾ ಪ್ರಾಧಿಕಾರದ ಸದಸ್ಯ ಎಚ್.ಎಂ.ಸುಬ್ಬರಾಜು ಮಾತನಾಡಿ, ಡಂದುಪಾಳ್ಯ ಗ್ರಾಮಸ್ಥರಿಗೆ ಎಂವಿಜೆ ಮೆಡಿಕಲ್ ಕಾಲೇಜಿನಿಂದ ಆರೋಗ್ಯ ಕಾರ್ಡ್ ವಿತರಣೆ ಮಾಡುತ್ತಿದ್ದು, ಯಾವುದೇ ಕಾಯಿಲೆ ಬಂದರೆ ₹10 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.
ಉದ್ಯಮಿಗಳಾದ ಬಿ.ವಿ.ಬೈರೇಗೌಡ, ಕೋಡಿಹಳ್ಳಿ ಸುರೇಶ್, ಇ ಮುತ್ಸಂದ್ರ ಆನಂದಪ್ಪ, ಪೂಜೇನ ಅಗ್ರಹಾರ ಕೃಷ್ಣಮೂರ್ತಿ, ಸದಾನಂದ್, ಕೊಳತೂರು ರಮೇಶ್, ನಗರ ಯೋಜನಾ ಪ್ರಾಧಿಕಾರದ ಅದ್ಯಕ್ಷ ಕೆಶವಮೂರ್ತಿ, ನಗರಸಭೆ ಸದಸ್ಯ ಗೌತಮ್, ಗುಟ್ಟಹಳ್ಳಿ ನಾಗರಾಜು, ವಾಗಟ ನರೇಂದ್ರಪ್ಪ, ನಗರಸಭೆ ಮುನಿರಾಜು, ಸಿದ್ದಾರ್ಥನಗರ ಹರೀಶ್, ಗೋವಿಂದಪ್ಪ, ವೆಂಕಟೆಶ್, ಅನಿಲ್, ಅರುಣ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.