ADVERTISEMENT

ದೊಡ್ಡಬಳ್ಳಾಪುರ: ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಗಡುವು

ದೊಡ್ಡಬಳ್ಳಾಪುರ ಶಾಸಕ ಶಾಸಕ ಧೀರಜ್‌ ಮುನಿರಾಜ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 5:14 IST
Last Updated 21 ಜೂನ್ 2024, 5:14 IST
​ ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಶಾಸಕ ಧೀರಜ್‌ ಮುನಿರಾಜ್‌ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ ನಡೆಯಿತು
​ ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಶಾಸಕ ಧೀರಜ್‌ ಮುನಿರಾಜ್‌ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆ ನಡೆಯಿತು   

ದೊಡ್ಡಬಳ್ಳಾಪುರ: ಮನೆ ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಜಲಜೀವನ್‌ ಮಿಷನ್‌(ಜೆಜೆಎಂ) ಕಾಮಗಾರಿಯನ್ನು ಮೂರು ತಿಂಗಳ ಒಳಗೆ ಮುಕ್ತಾಯಗೊಳಿಸಬೇಕು ಎಂದು ಶಾಸಕ ಧೀರಜ್‌ ಮುನಿರಾಜ್‌ ಗಡುವು ನೀಡಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ಇಲಾಖೆಗಳ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಜೆಜೆಎಂ ಕಾಮಗಾರಿಗಳು ತ್ವರಿತವಾಗಿ ಹಾಗೂ ತೃಪ್ತಿಕರವಾಗಿ ನಡೆದಿಲ್ಲ. ಗ್ರಾಮಗಳಲ್ಲಿ ಪೈಪ್‌ಲೈನ್‌ಗಳನ್ನು ಹಾಕಲು ಅಗೆಯಲಾಗಿರುವ ಕಾಲುವೆಗಳನ್ನು ಮುಚ್ಚಿಲ್ಲ. ಕೋಳಾಯಿ ಸಂಪರ್ಕ ಕಲ್ಪಿಸಲಾಗಿರುವ ಗ್ರಾಮಗಳಲ್ಲಿ ನೀರು ಎಲ್ಲೆಂದರಲ್ಲಿ ಜಿನುಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಕಾಮಗಾರಿ ಮುಕ್ತಾಯವಾಗಿರುವ ಗ್ರಾಮಗಳಲ್ಲಿ ಸೂಕ್ತ ಸ್ಥಳ ಪರಿಶೀಲನೆ ನಂತರವೇ ಗುತ್ತಿಗೆದಾರರಿಗೆ ಅಂತಿಮ ಬಿಲ್‌ ಪಾವತಿ ಮಾಡಬೇಕು. ಅಲ್ಲದೆ ಒಂದು ವರ್ಷಗಳ ಕಾಲ ಗುತ್ತಿಗೆದಾರರು ಸೂಕ್ತ ನಿರ್ವಹಣೆ ಮಾಡುವಂತೆ ಅಧಿಕಾರಿಗಳು ನಿಗಾವಹಿಸುವಂತೆ ಸೂಚಿಸಿದರು.

ತಾಲ್ಲೂಕಿನ ಶುದ್ಧ ಕುಡಿಯುವ ನೀರಿನ(ಆರ್‌.ಒ) ಘಟಕಗಳನ್ನು ಉತ್ತಮ ನಿರ್ವಹಣೆ ಇಲ್ಲದೆ ಹಲವಾರು ಗ್ರಾಮಗಳಲ್ಲಿ ಆರ್‌.ಒ ಘಟಕಗಳಿವೆ. ಆದರು ಜನರಿಗೆ ಉಪಯೋಗಕ್ಕೆ ಇಲ್ಲದಂತಾಗಿವೆ. ಹೋಬಳಿ ಮಟ್ಟದಲ್ಲಿ ಟೆಂಡರ್‌ ಕರೆಯುವ ಮೂಲಕ ಆರ್‌ಒ ಘಟಕಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ಏಜೆನ್ಸಿಗಳಿಗೆ ವಹಿಸಬೇಕಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳೂವಂತೆ ಶಾಸಕರು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ಮಳೆಗೆ ಸರ್ವೆಗೆ ಸೂಚನೆ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಕೆಯಾದ ನಂತರ ಸರ್ಕಾರದಿಂದ ಬರುವ ಅನುದಾನ ಹಾಗೂ ಕೈಗಾರಿಕೆಗಳಿಂದ ಸಂಗ್ರಹ ಆಗುವ ತೆರಿಗೆಯನ್ನು ಮಾತ್ರ ಅವಲಂಭಿಸದೆ ತೆರಿಗೆ ಸಂಗ್ರಹದ ಕಡೆಗೆ ಪ್ರಥಮ ಆದ್ಯತೆ ನೀಡಬೇಕು. ಕೈಗಾರಿಕಾ ಪ್ರದೇಶವನ್ನು ಹೊಂದಿರುವ ಬಾಶೆಟ್ಟಿಹಳ್ಳಿಯಲ್ಲಿ ಸಣ್ಣ ಪುಟ್ಟ ವಾಣಿಜ್ಯ ಮಳಿಗೆಯಿಂದ ಬಹುಮಹಡಿ ಬೃಹತ್‌ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿದೆ. ಆದರೆ ಸೂಕ್ತ ತೆರಿಗೆ ಸಂಗ್ರಹ ಹಾಗೂ ಮಳಿಗೆಗಳ ಸಂಖ್ಯೆ ಕುರಿತಂತೆ ಸರ್ವೆ ಕೆಲಸವನ್ನು ತುರ್ತಾಗಿ ನಡೆಸಬೇಕು ಎಂದು ಶಾಸಕ ಧೀರಜ್‌ಮುನಿರಾಜ್‌ ಹೇಳಿದರು.

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಶುದ್ದೀಕರಣ ಘಟಕ ಸ್ಥಗಿತವಾಗಿ ಹಲವಾರು ವರ್ಷಗಳು ಕಳೆದಿದ್ದರೂ, ಇದುವರೆಗೂ ಇದರ ದುರಸ್ಥಿಗೆ ಕ್ರಮ ಕೈಗೊಂಡಿಲ್ಲ. ಮುಂದಿನ ವಾರದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗುವುದು. ಇಲ್ಲಿನ ತ್ಯಾಜ್ಯ ನಿರ್ವಹಣ ಘಟಕದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಳೆದ ಬಜೆಟ್‌ ಅಧಿವೇಶನದಲ್ಲಿ ಸರ್ಕಾರ ತಪ್ಪು ಮಾಹಿತಿ ನೀಡಿದೆ. ಈ ಬಗ್ಗೆ ಮತ್ತೊಮ್ಮೆ ಅಧಿವೇಶನದಲ್ಲಿ ಪ್ರಶ್ನಿಸಲಾಗುವುದು ಎಂದರು.

ಪ್ರಗತಿ ಪರಿಶೀಲನ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಆಡಳಿತ ಅಧಿಕಾರಿ ರಾಮಕೃಷ್ಣಯ್ಯ, ತಹಶೀಳ್ದಾರ್‌ ವಿದ್ಯಾವಿಭಾರಾಥೋಡ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎನ್‌.ಮುನಿರಾಜ್‌, ನಗರಸಭೆ ಪೌರಾಯುಕ್ತ ಕೆ.ಪರಮೇಶ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಕಾಮಗಾರಿ ತೃಪ್ತಿಕರವಾಗಿಲ್ಲ

ದೊಡ್ಡಬಳ್ಳಾಪುರ ನಗರಸಭೆಯ ಸಮಸ್ಯೆಗಳು ಅರ್ಥವಾಗುತ್ತಲೇ ಇಲ್ಲ. ಇಲ್ಲಿನ ಆಡಳಿತ ವೈಖರಿ ಕುರಿತು ಪಿಎಚ್‌.ಡಿ ಮಾಡುವಷ್ಟು ಗೊಂದಲಮಯ ಮತ್ತು ಸಮಸ್ಯೆಗಳಿವೆ. ನಗರಸಭೆಯ ಆಡಳಿತ ಸಾಕಷ್ಟು ಸುಧಾರಣೆಯಾಗಬೇಕಿದೆ

-ಧೀರಜ್‌ಮುನಿಜ್‌ ಶಾಸಕ

ತಡಬಡಾಯಿಸಿದ ಎಂಜಿನಿಯರ್‌

ದೊಡ್ಡಬಳ್ಳಾಪುರ-ನೆಲಮಂಗಲ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿಯ ಮೇಲೆ ಈ ಹಿಂದೆ ಇದ್ದ ಕಬ್ಬಿಣ ತಡೆ ಕಂಬ ತೆರವುಗೊಳಿಸಿದ ನಂತರ ಮತ್ತೆ ಅದೇ ಸ್ಥಳದಲ್ಲಿಯೇ ಅದೇ ಹಳೇಯ ಕಬ್ಬಿಣದ ತಡೆ ಕಂಬಗಳನ್ನೇ ನೆಡಲಾಗುತ್ತಿದೆ. ಈ ಕಾಮಗಾರಿ ಬಗ್ಗೆ ಮಾಹಿತಿ ನೀಡುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಜಯಪ್ರಕಾಶ್‌ ಅವರನ್ನು ಶಾಸಕ ಧೀರಜ್‌ ಮುನಿರಾಜ್‌ ಪ್ರಶ್ನೆ ಮಾಡಿದರು. ಆದರೆ ಶಾಸಕರ ಪ್ರಶ್ನೆಯೇ ಅರ್ಥವಾಗಂತೆ ತಡಬಡಾಯಿಸಿದ ಎಂಜಿನಿಯರ್‌ ಕೊನೆಗೂ ಸಮರ್ಪಕ ಉತ್ತರವೇ ನೀಡಲಿಲ್ಲ. ಇದರಿಂದ ಬೇಸರಗೊಂಡ ಶಾಸಕರು ಸಭೆಯ ನಂತರ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದರು. ಅಂಗನವಾಡಿ ಆಹಾರ ಸರಿಯಿಲ್ಲ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಆಹಾರ ಗುಣಮಟ್ಟದಿಂದ ಕೂಡಿಲ್ಲ. ಈ ಬಗ್ಗೆ ಪೋಷಕರಿಂದ ಸಾಕಷ್ಟು ದೂರುಗಳು ಬಂದಿವೆ. ಈ ಬಗ್ಗೆ ಮುಂದಿನ ಅಧಿವೇಷನದಲ್ಲಿ ಪ್ರಶ್ನಿಸಲಾಗುವುದು ಎಂದು ಶಾಸಕ ಧೀರಜ್‌ ಮುನಿರಾಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.